ಬೆಂಗಳೂರು: ‘ಸರಿಯಾದ ಗುರು- ಗುರಿ ಇದ್ದರೆ ಜೀವನದಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ' ಎಂದು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದರು.
ನಗರದ ಯುನಿವರ್ಸಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ರ್ಯಾಂಕ್ ಪಡೆದ ಸಂಸ್ಥೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.
ಉತ್ತಮ ವಿದ್ಯೆ-ಸಂಸ್ಕಾರ ಯಶಸ್ಸಿನ ಗುಟ್ಟು. ಪ್ರತಿ ವಿದ್ಯಾರ್ಥಿಯ ಬಗ್ಗೆ ಹೆತ್ತವರಿಗೆ ಅಪಾರ ನಿರೀಕ್ಷೆಗಳಿರುತ್ತವೆ. ಅದನ್ನು ಶ್ರದ್ದೆ, ಕಾಯಕ, ಕಠಿಣ ಪರಿಶ್ರಮದ ಮೂಲಕ ಈಡೇರಿಸಲು ಎಲ್ಲರೂ ಪ್ರಯತ್ನಿಸಬೇಕು‘ ಎಂದು ತಿಳಿಸಿದರು.
ಯುಪಿಎಸ್ಸಿ ನಾಗರಿಕ ಸೇವೆ ಪರೀಕ್ಷೆಯಲ್ಲಿ 121ನೇ ರ್ಯಾಂಕ್ ಪಡೆದ ಶಾಶ್ವತ್, 384ನೇ ರ್ಯಾಂಕ್ ಪಡೆದ ಅಂಕುರ್ ಕುಮಾರ್ ಮತ್ತಿತರರನ್ನು ಅವರು ಸನ್ಮಾನಿಸಿದರು.
ಸಂಸ್ಥೆಯ ಅಧ್ಯಕ್ಷ ಆರ್ ಉಪೇಂದ್ರ ಶೆಟ್ಟಿ ಮಾತನಾಡಿದರು. ಕಾರ್ಯಕ್ರಮದ ಭಾಗವಾಗಿ ಸಾಧಕರೊಂದಿಗೆ ಪ್ರಶ್ನೋತ್ತರ ಕಾರ್ಯಕ್ರಮ ನಡೆಯಿತು. ಅದರಲ್ಲಿ ಪ್ರಭುಲಿಂಗ ಕವಳಿಕಟ್ಟಿ ಪಾಲ್ಗೊಂಡು ಮಾರ್ಗದರ್ಶನ ನೀಡಿದರು.