ಬೆಂಗಳೂರು: ಇದೀಗ ದಸರೆಯ ಸಂಭ್ರಮ. ಹಬ್ಬದ ನಿಮಿತ್ತ ಮಾರುಕಟ್ಟೆಯಲ್ಲಿ ಹೂ, ಹಣ್ಣುಗಳ ಬೆಲೆ ಏರಿಕೆಯಾಗುತ್ತಿದೆ. ತರಕಾರಿ ಬೆಲೆಯಲ್ಲಿ ಅಂತಹ ಏರಿಕೆಯಾಗಿಲ್ಲ. ಆದರೆ,ಸೊಪ್ಪಿನ ಬೆಲೆ ಹುಬ್ಬೇರಿಸುವಷ್ಟು ಏರಿಕೆ ಕಂಡಿದ್ದು, ಮಾರುಕಟ್ಟೆಯಲ್ಲಿ ಅದರದ್ದೇ ಕಾರುಬಾರು ಎನ್ನುವಂತಾಗಿದೆ.
ಬೆಲೆ ಏರಿಕೆಯ ನಡುವೆಯೂ ಗುರುವಾರ, ಮಾರುಕಟ್ಟೆಯಲ್ಲಿ ಜನ ಸಾಧಾರಣಪ್ರಮಾಣದಲ್ಲಿ ವ್ಯಾಪಾರ– ವಹಿವಾಟಿನಲ್ಲಿ ತೊಡಗಿದ್ದರು.
ಒಂದು ಕಟ್ಟು ಕೊತ್ತಂಬರಿ ಸೊಪ್ಪು ₹50ರಿಂದ ₹60ಕ್ಕೆ ಮಾರಾಟವಾದರೆ, ಪಾಲಕ್ ಸೊಪ್ಪು ₹30ರಿಂದ ₹40ಕ್ಕೆ ಮಾರಾಟವಾಗುತ್ತಿತ್ತು. ಇನ್ನುಳಿದ ಸೊಪ್ಪಿನ ಬೆಲೆಯೂ ಏರಿಕೆಯಾಗಿದೆ.
ಸೇಬು, ದಾಳಿಂಬೆ, ಅಂಜೂರ ಕೊಂಡುಕೊಳ್ಳಲು ಸಹ ಗ್ರಾಹಕರು ಹೆಚ್ಚಿನ ಬೆಲೆ ತೆರಬೇಕಾಗಿದೆ. ಏಲಕ್ಕಿ ಬಾಳೆಯ ಬೆಲೆ ಕೆ.ಜಿಗೆ ₹60 ದಾಟಿದೆ. ಹಾಪ್ಕಾಮ್ಸ್ನಲ್ಲಿ ₹68ಕ್ಕೆ ಮಾರಾಟ ಮಾಡಲಾಗುತ್ತಿದೆ.
ಸ್ಥಿರತೆ ಕಾಯ್ದುಕೊಂಡ ತರಕಾರಿ: ಹಬ್ಬದ ನಿಮಿತ್ತ ತರಕಾರಿ ಬೆಲೆಗಳಲ್ಲೇನೂ ಭಾರಿ ವ್ಯತ್ಯಾಸವಾಗಿಲ್ಲ. ಬೆಳ್ಳುಳ್ಳಿ, ಈರುಳ್ಳಿ, ಟೊಮೆಟೊ ದರಗಳು ಕಡಿಮೆ ಇದ್ದವು. ಆದರೆ, ಬೀನ್ಸ್ (ಕೆ.ಜಿಗೆ ₹60), ಬೂದುಗುಂಬಳ ಕಾಯಿ ದರಗಳಲ್ಲಿ ಏರಿಕೆಯಾಗಿರುವುದು ಕಂಡು ಬಂತು.
‘ಈ ಬಾರಿ ಸೊಪ್ಪಿನ ಬೆಳೆಯಲ್ಲಿ ಇಳುವರಿ ಕಡಿಮೆಯಾಗಿದ್ದರಿಂದ ದರ ಏರಿಕೆಯಾಗಿದೆ. ಹಬ್ಬದ ಹೊತ್ತಿಗೆ ಮತ್ತಷ್ಟು ದರ ಏರಿಕೆಯಾಗಲಿದೆ. ದರ ಏರಿಕೆಯಿಂದ ಸದ್ಯ ಬೇಡಿಕೆ ಕಡಿಮೆ ಇದೆ. ಮಾರುಕಟ್ಟೆಯಲ್ಲಿ ಖರೀದಿಸುವ ಜನರೂ ಕಡಿಮೆ ಇದ್ದಾರೆ’ ಎಂದು ಸೊಪ್ಪಿನ ವ್ಯಾಪಾರಿ ರಮಾಬಾಯಿ ತಿಳಿಸಿದರು.