ತುರ್ತುಚಿಕಿತ್ಸೆ ವಿಭಾಗದ ಡಾ. ಹರ್ಷಿತಾ ಶ್ರೀಧರ್ ಅವರು ಸಂಚಾರ ಪೊಲೀಸರಿಗೆ ತರಬೇತಿ ನೀಡಿದರು. ನಗರದ ಪ್ರಮುಖ ವೃತ್ತಗಳಲ್ಲಿ ಸಾರ್ವಜನಿಕರು ಹೃದಯಾಘಾತ ಅಥವಾ ಹೃದಯ ಸ್ತಂಭನದಿಂದ ಕುಸಿದು ಬಿದ್ದರೆ ಅವರಿಗೆ ಪ್ರಥಮ ಚಿಕಿತ್ಸೆ ನೀಡುವ ವಿಧಾನಗಳನ್ನು ವಿವರಿಸಿದರು. ‘ಮೊದಲು ನಮ್ಮ ಎರಡೂ ಕೈಗಳನ್ನು ಒಂದರ ಮೇಲೆ ಒಂದರಂತೆ ಜೋಡಿಸಿ, ರೋಗಿಯ ಎದೆಭಾಗವನ್ನು ಬಲವಾಗಿ ಒತ್ತಬೇಕು. ತಲೆಯನ್ನು ಸ್ವಲ್ಪ ಹಿಂದಕ್ಕೆ ವಾಲಿಸಿ, ಮೂಗು ಮುಚ್ಚಿ ಬಾಯಿಗೆ ನಮ್ಮ ಬಾಯಿಯಿಂದ ಉಸಿರಾಟ ಕೊಡಬೇಕು. ಇದರಿಂದ ರೋಗಿಯು ಸ್ವಲ್ಪ ಚೇತರಿಸಿಕೊಳ್ಳುತ್ತಾರೆ. ನಂತರ ಆಸ್ಪತ್ರೆಗೆ ದಾಖಲಿಸಬೇಕು’ ಎಂದು ಮಾಹಿತಿ ನೀಡಿದರು.