ಬೆಂಗಳೂರು: ಹಿರಿಯ ಪತ್ರಕರ್ತ ಅರ್ನಬ್ ಗೋಸ್ವಾಮಿ ವಿರುದ್ಧ ನಡೆದ ದಬ್ಬಾಳಿಕೆ ಹಾಗೂ ಅವರನ್ನು ಇಂದು ಬಂಧಿಸುವ ಪ್ರಯತ್ನ ಪತ್ರಕರ್ತರಿಗೆ ಭಯ ಹುಟ್ಟಿಸುವಂತಹದ್ದಾಗಿದೆ. 1975ರ ತುರ್ತು ಪರಿಸ್ಥಿತಿಯ ನೆನಪನ್ನು ಮಾಡಿಸುವ ಈ ಕೃತ್ಯವನ್ನು ವಿಶ್ವ ಹಿಂದೂ ಪರಿಷತ್ ತೀವ್ರವಾಗಿ ಖಂಡಿಸುತ್ತದೆ ಎಂದು ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅರ್ನಾಬ್ ಗೋಸ್ವಾಮಿ ವಿವಿಧ ವಿಷಯಗಳಲ್ಲಿ ರಾಜಕೀಯ ಹಾಗೂ ಇನ್ನಿತರ ಪ್ರಭಾವಿ ವ್ಯಕ್ತಿಗಳ ಭ್ರಷ್ಟತೆಯನ್ನು ಬಯಲಿಗೆಳೆದಿರುವುದು ಎಲ್ಲರ ಕೆಂಗಣ್ಣಿಗೆ ಪಾತ್ರವಾಗಿದೆ. ರಾಜಕೀಯ ಹಾಗೂ ಸ್ವಾರ್ಥ ಹಿತಾಸಕ್ತಿಯ ಕೈಗೊಂಬೆಯಾಗಿರುವ ಮುಂಬೈ ಪೊಲೀಸ್ ಆಯುಕ್ತರಾದ ಪರಂ ಬೀರ್ ಸಿಂಗ್ ಸಂವಿಧಾನದ ಚೌಕಟ್ಟು ಮೀರಿ ದ್ವೇಷಪೂರಿತರಾಗಿ ಅರ್ನಬ್ ಗೋಸ್ವಾಮಿಯವರ ವಿರುದ್ಧ ಹಗೆ ಸಾಧಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದಿದ್ದಾರೆ.
ಏಕಪಕ್ಷೀಯವಾಗಿ ವರ್ತಿಸುತ್ತಿರುವ ಮಹಾರಾಷ್ಟ್ರ ಸರ್ಕಾರ, ಮುಂಬೈ ಪೊಲೀಸ್ ಆಯುಕ್ತರಾದ ಪರಂ ಬೀರ್ ಸಿಂಗ್ ಹಾಗೂ ಅಲ್ಲಿನ ಆರಕ್ಷಕರು ಸಭ್ಯತೆಯಿಂದ ವರ್ತಿಸಬೇಕು ಹಾಗೂ ಈ ವಿಷಯವಾಗಿ ಸಂಪೂರ್ಣ ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದು ವಿಎಚ್ಪಿ ಆಗ್ರಹಿಸುತ್ತದೆ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.