ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಿಗ್ಗೆ ಗೋಡೆ ಸಮೇತ ಶೆಡ್ ಕುಸಿದಿದ್ದು, ಬಿಹಾರದ ಕಾರ್ಮಿಕ ಪೂರನ್ ಪೂಜಾರಿ (19) ಎಂಬುವರು ಮೃತಪಟ್ಟಿದ್ದಾರೆ.
‘ನಗರದಲ್ಲಿ ಗುರುವಾರ ರಾತ್ರಿ ಜೋರು ಮಳೆ ಆಗಿದೆ. ನೀರಿನಿಂದ ನೆನೆದು ಗೋಡೆ ಕುಸಿದಿದ್ದರಿಂದ ಈ ಅವಘಡ ಸಂಭವಿಸಿದೆ’ ಎಂದು ಸ್ಥಳೀಯರು ಹೇಳಿದರು.
ಇಸ್ಕಾನ್ ದೇವಸ್ಥಾನದ ಸಮೀಪದಲ್ಲಿ ಸಿಕಾನ್ ಕಂಪನಿ ವತಿಯಿಂದ ಕಟ್ಟಡ ನಿರ್ಮಾಣ ಕೆಲಸ ನಡೆಯುತ್ತಿದೆ. ಕೆಲಸಕ್ಕೆ ಬಂದಿದ್ದ ಕಾರ್ಮಿಕರಿಗೆ ತಾತ್ಕಾಲಿಕವಾಗಿ ಶೆಡ್ ನಿರ್ಮಿಸಲಾಗಿತ್ತು. ಶೆಡ್ಗೆ ಹೊಂದಿಕೊಂಡು ಹಳೇ ಗೋಡೆ ಇತ್ತು.
ಬೆಳಿಗ್ಗೆ 5.30ರ ಸುಮಾರಿಗೆ ಏಕಾಏಕಿ ಗೋಡೆ ಕುಸಿದು ಶೆಡ್ ಮೇಲೆ ಬಿದ್ದಿತ್ತು. ಶೆಡ್ ಸಹ ನೆಲಕ್ಕುರುಳಿತ್ತು. ಶೆಡ್ನಲ್ಲಿ ಮಲಗಿದ್ದ ಪೂರನ್ ಮೇಲೆಯೇ ಇಟ್ಟಿಗೆಗಳು ಬಿದ್ದಿದ್ದವು. ಅದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಜೊತೆ ಶೆಡ್ನಲ್ಲಿ ಮಲಗಿದ್ದ ಭವಾನಿ ಸಿಂಗ್ (21) ಹಾಗೂ ಮಿಥುನ್ (22) ಎಂಬುವರು ತೀವ್ರವಾಗಿ ಗಾಯಗೊಂಡಿದ್ದಾರೆ. ಅವರನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾಲೀಕರ ವಿರುದ್ಧ ಪ್ರಕರಣ: ‘ಪೂರನ್ ಹಾಗೂ ಸ್ನೇಹಿತರು, ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದರು. ಕಟ್ಟಡ ನಿರ್ಮಾಣದಲ್ಲಿ ಕಾರ್ಮಿಕರಾಗಿ ಕೆಲಸಕ್ಕೆ ಸೇರಿದ್ದರು. ನಿರ್ಮಾಣ ಹಂತದ ಕಟ್ಟಡದ ಸಮೀಪದಲ್ಲೇ ತಾತ್ಕಾಲಿಕವಾಗಿ ಶೆಡ್ ನಿರ್ಮಿಸಲಾಗಿತ್ತು. ಅಲ್ಲಿಯೇ ಸ್ನೇಹಿತರು ನೆಲೆಸಿದ್ದರು’ ಎಂದು ಪೊಲೀಸರು ಹೇಳಿದರು.
‘ಪೂರನ್ ಮೃತದೇಹವನ್ನು ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಬಿಹಾರದಲ್ಲಿರುವ ಅವರ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ. ಅವರು ನಗರಕ್ಕೆ ಬಂದ ನಂತರ, ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ಘಟನೆ ಸಂಬಂಧ ಕಟ್ಟಡದ ಮಾಲೀಕರು ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದೂ ಅವರು ತಿಳಿಸಿದರು.
‘ಕುಸಿದಿರುವ ಗೋಡೆಯು ಹಳೆಯದ್ದಾಗಿತ್ತು. ಬೀಳುವ ಹಂತದಲ್ಲಿತ್ತು. ಇಷ್ಟಾದರೂ ಮಾಲೀಕರು, ಅದೇ ಸ್ಥಳದಲ್ಲೇ ತಾತ್ಕಾಲಿಕ ಶೆಡ್ ನಿರ್ಮಿಸಿಕೊಟ್ಟಿದ್ದಾರೆ’ ಎಂದೂ ಹೇಳಿದರು.