ರಾಜರಾಜೇಶ್ವರಿ ನಗರ:‘ಕಾಮಗಾರಿಗಳು ಉತ್ತಮ ಗುಣಮಟ್ಟದಿಂದ ಕೂಡಿರಬೇಕು ಮತ್ತು ಹಲವು ವರ್ಷ ಬಾಳಿಕೆ ಬರುವಂತೆ ನಡೆಯಬೇಕು. ಆಗ ಮಾತ್ರ ನಮ್ಮ ಕೆಲಸ ಜನರ ಮನಸ್ಸಿನಲ್ಲಿ ಉಳಿಯಲು ಸಾಧ್ಯ’ ಎಂದು ತೋಟಗಾರಿಕೆ ಸಚಿವ ಮುನಿರತ್ನ ಹೇಳಿದರು.
ರಾಜರಾಜೇಶ್ವರಿ ನಗರ ವ್ಯಾಪ್ತಿಯಲ್ಲಿ ಬಿಬಿಎಂಪಿ ವತಿಯಿಂದ ₹26.50 ಕೋಟಿ ವೆಚ್ಚದಲ್ಲಿ ಮೈಸೂರು ರಸ್ತೆಯ ಪ್ರವೇಶ ದ್ವಾರದಿಂದ ಕೆಂಗೇರಿ–ಉತ್ತರಹಳ್ಳಿ ಮುಖ್ಯರಸ್ತೆಯವರೆಗೆ ವೈಟ್ ಟಾಪಿಂಗ್ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ರಸ್ತೆಯ ನಡುವೆ ಹೂವು, ಹಣ್ಣು ಬಿಡುವ ಹಾಗೂ ಆರೋಗ್ಯವರ್ಧಕ ಮರಗಳನ್ನು ಬೆಳೆಸಬೇಕು. ಕಾಮಗಾರಿ ನಡೆಯುವ ಸಮಯದಲ್ಲಿಅಧಿಕಾರಿಗಳು ಪ್ರತಿದಿನ ಗಮನಹರಿಸಬೇಕು’ ಎಂದು ಸೂಚಿಸಿದರು.
ಬಿಬಿಎಂಪಿ ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್ ಲೋಕೇಶ್,‘3.5 ಕಿ.ಮೀ ಉದ್ದದ ವೈಟ್ ಟಾಪಿಂಗ್ ರಸ್ತೆಯನ್ನು ಐದು ತಿಂಗಳ ಒಳಗೆ ಪೂರ್ಣಗೊಳಿಸಲಾಗುವುದು’ ಎಂದರು.
ರಾಜರಾಜೇಶ್ವರಿ ದೇವಸ್ಥಾನ ಸಮೀಪ ₹75 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಶಾಸಕರ ಕಚೇರಿಯನ್ನೂ ಮುನಿರತ್ನ ಉದ್ಘಾಟಿಸಿದರು.