ಬೆಂಗಳೂರು: ತಂಬಾಕು ಉತ್ಪನ್ನಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳು ಅವರ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರಲ್ಲಿ ಅರಿವು ಮೂಡಿಸಬೇಕು ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರೋಳ್ಕರ್ ವಿಕಾಸ್ ಕಿಶೋರ್ ಹೇಳಿದರು.
ಬಿಬಿಎಂಪಿ ಹಾಗೂ ಇತರೆ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ‘ವಿಶ್ವ ತಂಬಾಕು ರಹಿತ ದಿನ’ದ ಅಂಗವಾಗಿ ಹಮ್ಮಿಕೊಂಡಿದ್ದ ವಾಕಥಾನ್ಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ತಂಬಾಕು ಉದ್ಯಮದ ಪ್ರಭಾವದಿಂದ ಮಕ್ಕಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಎಲ್ಲಾ ನಾಗರಿಕರು ಉತ್ತಮ ಆರೋಗ್ಯಕ್ಕಾಗಿ ಮುಂದಿನ ಆರೋಗ್ಯಕರ ಸಮಾಜಕ್ಕಾಗಿ ತಂಬಾಕು ರಹಿತ ಜೀವನ ನಡೆಸಬೇಕು’ ಎಂದು ಮನವಿ ಮಾಡಿದರು.
ಸ್ವಾತಂತ್ರ್ಯ ಉದ್ಯಾನದಿಂದ ಕೆ.ಆರ್ ವೃತ್ತದ ಮೂಲಕ ಕಬ್ಬನ್ ಪಾರ್ಕ್ನಿಂದ ಕಸ್ತೂರಬಾ ರಸ್ತೆ, ಹಡ್ಸನ್ ವೃತ್ತದಿಂದ ಟೌನ್ಹಾಲ್ವರೆಗೂ ವಾಕಥಾನ್ ಸಾಗಿತು.
ಯುನಿವರ್ಸಲ್ ನರ್ಸಿಂಗ್ ಕಾಲೇಜು, ರಾಜೀವ್ ಗಾಂಧಿ ನರ್ಸಿಂಗ್ ಕಾಲೇಜು, ಬಿಎನ್ಎಂ ಪದವಿ ಕಾಲೇಜು, ವೈಧಿ ನರ್ಸಿಂಗ್ ಕಾಲೇಜು, ನಾರಾಯಣ ನರ್ಸಿಂಗ್ ಕಾಲೇಜು, ಬಿಎಂಎಸ್ ಎಂಜಿನಿಯರಿಂಗ್– ನರ್ಸಿಂಗ್ ಕಾಲೇಜು, ಆರ್.ವಿ. ನರ್ಸಿಂಗ್ ಕಾಲೇಜು ಸೇರಿದಂತೆ ವಿವಿಧ ಕಾಲೇಜುಗಳಿಂದ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಮುಖ್ಯ ಆರೋಗ್ಯಾಧಿಕಾರಿ ಡಾ. ಮದನಿ, ತಂಬಾಕು ನಿಯಂತ್ರಣದ ಕಾರ್ಯಕ್ರಮ ಅಧಿಕಾರಿ ಡಾ. ಕುಮಾರ್ ಉಪಸ್ಥಿತರಿದ್ದರು.
ಬಹುಮಾನ: ವಿಶ್ವ ತಂಬಾಕು ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ನಿಧಿ ಬೇಟೆ, ರೀಲ್ಸ್ ಸ್ಪರ್ಧೆ/ಕಿರು ಚಿತ್ರ ಸ್ಪರ್ಧೆ ಹಾಗೂ ಪೋಸ್ಟರ್ ಸ್ಪರ್ಧೆ ವಿಜೇತರಿಗೆ ವಾಕಥಾನ್ ಬಳಿಕ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು.
ನಿಧಿ ಬೇಟೆ ವಿಜೇತರು: ಪ್ರಥಮ– ನಯನ ಹಾಗೂ ಕೀರ್ತನಾ, ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ₹25,000
ರನ್ನರ್ ಅಪ್: ಕೀರ್ತನಾ, ಎಐಟಿ ಎಂಜಿನಿಯರಿಂಗ್ ಕಾಲೇಜು, ₹ 5,000
ರೀಲ್ಸ್/ಕಿರು ಚಿತ್ರ ವಿಜೇತರು: ಪ್ರಥಮ– ಸಂಗೀತಾ, ₹20,000. ದ್ವಿತೀಯ– ನಾಗೇಶ್ವರಿ, ₹12,500. ತೃತೀಯ– ಅಮಲ್ ಖೈಜ್,₹7,500.
ಪೋಸ್ಟರ್ ಸ್ಪರ್ಧೆ ವಿಜೇತರು: ಪ್ರಥಮ– ಶಾಲಿನಿ ಹಾಗೂ ಮಹೇಶ, ₹ 5,000. ದ್ವಿತೀಯ– ಲಿನೇಶಾ, ₹ 3,000. ತೃತೀಯ– ಸಾಂಡ್ರಾ ಸಾಲ್ವಿಯಸ್ ಹಾಗೂ ಸೋನಾ ಆಂಟೋನಿ, ₹2,000.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.