ಬೆಂಗಳೂರು: ರೋಗ ಮುಕ್ತ ಕರ್ನಾಟಕ ಹಾಗೂ ಪ್ರಧಾನಿ ಮೋದಿ ಅವರ ಜನ್ಮದಿನದ ಪ್ರಯುಕ್ತ ಸೆ. 17ರಂದು ಯೋಗಾಥಾನ್ ಹಮ್ಮಿಕೊಳ್ಳಲಾಗಿದ್ದು, ಏಕಕಾಲದಲ್ಲಿ ಐದು ಲಕ್ಷ ಜನರು ಭಾಗವಹಿಸುವರು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಹೇಳಿದರು.
ರಾಜ್ಯದ ಜಿಲ್ಲಾಧಿಕಾರಿಗಳು, ಸಿಇಒಗಳ ಜತೆ ಶುಕ್ರವಾರ ವಿಡಿಯೊ ಸಂವಾದ ನಡೆಸಿದ ಅವರು, ಸೆ.17ರಂದು ನಡೆಯಲಿರುವ ಯೋಗಾಥಾನ್ ಕಾರ್ಯ ಕ್ರಮದ ಪೂರ್ವ ಸಿದ್ದತೆ ಬಗ್ಗೆ ಮಾಹಿತಿ ಪಡೆದುಕೊಂಡರು. ಯೋಗಾಥಾನ್ ಗಿನ್ನೆಸ್ ದಾಖಲೆ ನಿರೀಕ್ಷೆ ಇದ್ದು, ಸಿದ್ದತೆ ಮಾಡಿಕೊಳ್ಳುವಂತೆ ಸೂಚಿಸಿದರು.
ಸ್ವಾಮಿ ವಿವೇಕಾನಂದ ಯುವ ಸ್ವಸಹಾಯ ಸಂಘಗಳನ್ನು ಪ್ರತಿ ಗ್ರಾಮ ಪಂಚಾಯತಿಯಲ್ಲೂ ರಚಿಸಬೇಕು. ಸಂಘ ನೋಂದಣಿಯಾದ ತಕ್ಷಣ ₹ 10 ಸಾವಿರ ಬಿಡುಗಡೆ ಮಾಡಲಾಗುವುದು. ನರೇಗಾ ಮೂಲಕ ₹ 504 ಕೋಟಿ ವೆಚ್ಚದಲ್ಲಿ ಕ್ರೀಡಾ ಅಂಕಣಗಳನ್ನು ನಿರ್ಮಿಸಲು ಸೂಚಿಸಲಾಗಿದೆ. ಗ್ರಾಮೀಣ ಪ್ರತಿಭೆಗಳಿಗೆ ಸೂಕ್ತ ತರಬೇತಿ ಸಿಗಬೇಕು ಎನ್ನುವುದು ಸರ್ಕಾರದ ಆಶಯ ಎಂದರು.