ಬೆಂಗಳೂರು: ನಗರ ಪ್ರದೇಶದಲ್ಲಿ ದಿನಕ್ಕೆ 20 ರೂಪಾಯಿ ಮತ್ತು ಗ್ರಾಮೀಣ ಭಾಗದಲ್ಲಿ 15 ರೂಪಾಯಿ ಆದಾಯ ಗಳಿಸುವವರು ಬಡವರಲ್ಲ ಎಂಬ ಮಾನದಂಡದ ಮೇಲೆ ಬಡತನ ರೇಖೆ ನೀತಿ ರೂಪಿಸಲು ಮುಂದಾಗಿರುವ ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ಸಿಂಗ್ ಅಹ್ಲುವಾಲಿಯ ಅವರ ಕ್ರಮವನ್ನು ಖಂಡಿಸಿ `ಆಹಾರದ ಹಕ್ಕಿಗಾಗಿ ಆಂದೋಲನ ಕರ್ನಾಟಕ~ ಸಂಘಟನೆ ಸದಸ್ಯರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಆನಂದರಾವ್ ವೃತ್ತದ ಗಾಂಧಿ ಪ್ರತಿಮೆ ಬಳಿ ಶುಕ್ರವಾರ ಪ್ರತಿಭಟನೆ ಮಾಡಿದ ಅವರು ಬಡತನ ರೇಖೆ ನೀತಿಗೆ ಅಹ್ಲುವಾಲಿಯ ಅವರು ಆಯ್ದುಕೊಂಡಿರುವ ಮಾನದಂಡ ಅಸಂಬದ್ಧವಾಗಿದೆ. ಬಡತನದ ಸಂಬಂಧ ಅವರು ನೀಡಿರುವ ವರದಿಯಂತೆ ಬಡತನ ರೇಖೆ ಮಿತಿ ನಿಗದಿಯಾದರೆ ದೇಶದ ಬಹುಪಾಲು ಜನರಿಗೆ ಆಹಾರ ಭದ್ರತೆ ಹಾಗೂ ಸಾಮಾಜಿಕ ಭದ್ರತೆ ಇಲ್ಲವಾಗುತ್ತದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು `ಬಡತನ ರೇಖೆ ಮಿತಿ ನಿಗದಿಗೆ ಅಹ್ಲುವಾಲಿಯ ಅವರು ಸೂಚಿಸಿರುವ ಮಾನದಂಡ ಅವೈಜ್ಞಾನಿಕವಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ಅವರ ವರದಿಯನ್ನು ಒಪ್ಪಿಕೊಳ್ಳಬಾರದು. ಸರ್ಕಾರ ಜನಪರವಾದ ನೀತಿಯನ್ನು ಜಾರಿಗೊಳಿಸಬೇಕು~ ಎಂದರು.
ದೇಶದ ಆರ್ಥಿಕ ನೀತಿ ರೂಪಿಸುವಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವ ಅಹ್ಲುವಾಲಿಯ ಅವರು ಬೇಜವಾಬ್ದಾರಿಯುತವಾಗಿ ವರ್ತಿಸುತ್ತಿ ದ್ದಾರೆ. ಅವರು ಜನಸಾಮಾನ್ಯರ ಆಹಾರದ ಹಕ್ಕನ್ನೇ ಕಸಿದುಕೊಳ್ಳಲು ಮುಂದಾಗಿದ್ದಾರೆ. ಇಂತಹ ಜನ ವಿರೋಧಿ ನಿಲುವು ಹೊಂದಿರುವ ಅವರನ್ನು ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಹುದ್ದೆಯಿಂದ ಹೊರಗಿಡಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು. ನಂತರ ಪ್ರತಿಭಟನಾಕಾರರು ಅಹ್ಲುವಾಲಿಯ ಅವರನ್ನು ಭೇಟಿ ಮಾಡಿ ಮನವಿಪತ್ರ ಸಲ್ಲಿಸಿದರು.