ಬೆಂಗಳೂರು: ನಟ ಡಾ. ವಿಷ್ಣುವರ್ಧನ್ ಅವರ ನಾಲ್ಕನೇ ಪುಣ್ಯ ತಿಥಿಯ ಅಂಗವಾಗಿ ಇದೇ ೩೦ರಂದು ಕಾಮಿಕ್ಸ್ ಪುಸ್ತಕ ಸರಣಿ ಬಿಡುಗಡೆ, ಬೃಹತ್ ಆರೋಗ್ಯ ತಪಾಸಣೆ ಶಿಬಿರ, ಕಿರುಚಿತ್ರ– ಸಾಕ್ಷ್ಯಚಿತ್ರ ಸ್ಪರ್ಧೆ ಇನ್ನಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ವಿಷ್ಣುವರ್ಧನ್ ಪತ್ನಿ ಭಾರತಿ ಹಾಗೂ ಅಳಿಯ ಅನಿರುದ್ಧ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತ ವಿವರ ನೀಡಿ, ಪ್ರತಿ ವರ್ಷದಂತೆ ಈ ಬಾರಿಯೂ ವಿಷ್ಣು ಸ್ಮರಣೆಯಲ್ಲಿ ಕಾರ್ಯಕ್ರಮ ಏರ್ಪಡಿಸಲು ಹಲವು ಸಂಸ್ಥೆಗಳು ಮುಂದಾಗಿವೆ ಎಂದರು.
ಅಭಿಮಾನ್ ಸ್ಟುಡಿಯೋ ಆವರಣದಲ್ಲಿ ರೋಟರಿ ಕ್ಲಬ್ ವತಿಯಿಂದ ಬೃಹತ್ ಆರೋಗ್ಯ ತಪಾಸಣೆ ಶಿಬಿರ ನಡೆಯಲಿದೆ. ರಕ್ತದೊತ್ತಡ, ಮಧುಮೇಹ ಸೇರಿದಂತೆ ಹಲವು ಬಗೆಯ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ತಪಾಸಣೆ ನಡೆಸಲಾಗುವುದು. ಅಗತ್ಯವಿರುವ ರೋಗಿಗಳಿಗೆ ಅಲ್ಪ ವೆಚ್ಚದಲ್ಲಿ ಡಯಾಲಿಸಿಸ್ ಮಾಡುವುದು; ಪೋಲಿಯೋದಿಂದ ಕಾಲುಗಳ ಸ್ವಾಧೀನ ಕಳೆದುಕೊಂಡಿರುವವರಿಗೆ ಕೃತಕ ಕಾಲು ಅಳವಡಿಸುವುದು, ಉಚಿತ ದಂತ ತಪಾಸಣೆ ಹಾಗೂ ಚಿಕಿತ್ಸೆ ಕೈಗೊಳ್ಳಲಾಗುವುದು ಎಂದು ಅನುರುದ್ಧ ಹೇಳಿದರು.
‘ವಾಸನ್ ಐ ಕೇರ್ ಆಸ್ಪತ್ರೆ’ಯು ನೇತ್ರ ತಪಾಸಣೆ ನಡೆಸಲಿದ್ದು, ಅಗತ್ಯವಿದ್ದರೆ ಉಚಿತವಾಗಿ ಶಸ್ತ್ರಚಿಕಿತ್ಸೆಯನ್ನೂ ಮಾಡಲಿದೆ. ಡಿ.ಎ.ಪಾಂಡು ಸ್ಮಾರಕ ಆರ್.ವಿ. ಡೆಂಟಲ್ ಕಾಲೇಜಿನ ನೇತೃತ್ವದಲ್ಲಿ ದಂತ ಆರೋಗ್ಯ ಕುರಿತು ಜಾಗೃತಿ ಅಭಿಯಾನ, ತಪಾಸಣೆ, ಆಯೋಜಿಸಲಾಗಿದೆ. ಇದರೊಂದಿಗೆ ಸಂಜೀವಿನಿ ನ್ಯೂರೊಥೆರಪಿ ಆರೋಗ್ಯ ಕೇಂದ್ರವು ಔಷಧಿರಹಿತ ಚಿಕಿತ್ಸೆ ಬಗ್ಗೆ ಹಾಗೂ ಸ್ತನ ಕ್ಯಾನ್ಸರ್ ಕುರಿತು ಪೂರ್ಣಸುಧಾ ಕ್ಯಾನ್ಸರ್ ಫೌಂಡೇಶನ್ ಜನರಿಗೆ ಮಾಹಿತಿ ನೀಡಲಿದೆ.
ನಾರಾಯಣ ಹೃದಯಾಲಯದಿಂದ ಹೃದಯ ತಪಾಸಣೆ ಆಯೋಜಿಸಲಾಗಿದ್ದು, ಇದು ಜನವರಿ ತಿಂಗಳಿಡೀ ನಡೆಯಲಿದೆ. ಹುಬ್ಬಳ್ಳಿ, ಕೋಲಾರ, ದಾವಣೆಗೆರೆ ಇತರ ಕಡೆಗಳಲ್ಲೂ ಶಿಬಿರ ಏರ್ಪಡಿಸಲಾಗಿದೆ. ಡಾ. ವಿಷ್ಣು ರಕ್ತವಾಹಿನಿ ಪ್ರತಿಷ್ಠಾನದ ನೇತೃತ್ವದಲ್ಲಿ ರಕ್ತದಾನ ಶಿಬಿರ ನಡೆಯಲಿದೆ.