ಬೆಂಗಳೂರು: ಭೂ ಕಬಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ನಗರದ 11ನೇ ಎಸಿಎಂಎಂ ನ್ಯಾಯಾಲಯದ ನಿರ್ದೇಶನದ ಹಿನ್ನೆಲೆಯಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಕೆ.ಸಿ.ರಾಮಮೂರ್ತಿ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ಕೊತ್ತನೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ದೊಡ್ಡಗುಬ್ಬಿ ಸಮೀಪದ ‘ಅಥಿನಾ ಟೌನ್ಶಿಪ್’ನಲ್ಲಿನ ಅನಿವಾಸಿ ಭಾರತೀಯರ (ಎನ್ಆರ್ಐ) ನಿವೇಶನಗಳನ್ನು ಅಕ್ರಮವಾಗಿ ಕಬಳಿಸಲಾಗಿದೆ ಎಂದು ಆರೋಪಿಸಿ ಸ್ಟೀಫನ್ ವಿ.ವರ್ಗೀಸ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಪ್ರಕರಣದ ತನಿಖೆ ನಡೆಸುವಂತೆ ಕೊತ್ತನೂರು ಪೊಲೀಸರಿಗೆ ನಿರ್ದೇಶಿಸಿದೆ.
‘ನ್ಯಾಯಾಲಯದ ನಿರ್ದೇಶನದಂತೆ ಕೆ.ಸಿ.ರಾಮಮೂರ್ತಿ ಸೇರಿದಂತೆ 14 ಮಂದಿ ವಿರುದ್ಧ ದೂರು ದಾಖಲಿಸಿಕೊಂಡು ನಿವೇಶನಗಳ ಮಾಲೀಕತ್ವಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಕಂದಾಯ ಇಲಾಖೆಯಿಂದ ಸಂಗ್ರಹಿಸಲಾಗುತ್ತಿದೆ’ ಎಂದು ಈಶಾನ್ಯ ವಿಭಾಗದ ಡಿಸಿಪಿ ಟಿ.ಆರ್.ಸುರೇಶ್ ತಿಳಿಸಿದ್ದಾರೆ.
‘1994ರಲ್ಲಿ ಜೋಸೆಫ್ ಚಾಕೋ ಎಂಬುವರಿಂದ ಅಥಿನಾ ಟೌನ್ಶಿಪ್ ಲೇಔಟ್ನಲ್ಲಿ 60/80 ವಿಸ್ತೀರ್ಣದ ನಾಲ್ಕು ನಿವೇಶನಗಳನ್ನು ಖರೀದಿಸಲಾಗಿತ್ತು. ನಿವೃತ್ತ ಐಪಿಎಸ್ ಅಧಿಕಾರಿ ರಾಮಮೂರ್ತಿ ಮತ್ತು ಅವರ ಕುಟುಂಬ ಸದಸ್ಯರಾದ ಕೆ.ಎಸ್.ಬಾಲಸುಂದರ ರೆಡ್ಡಿ, ಕೆ.ಎಸ್.ಶಂಕರರೆಡ್ಡಿ, ಕೆ.ವಿ.ರಾಜಗೋಪಾಲ ರೆಡ್ಡಿ, ಕೆ.ಇ.ಬಾಬು ಸೇರಿದಂತೆ ಮತ್ತಿತರರು, ನಿವೇಶನದ ಸುತ್ತಲಿನ ಕಾಂಪೌಂಡ್ ಧ್ವಂಸ ಮಾಡಿ ಅತಿಕ್ರಮ ಪ್ರವೇಶ ಮಾಡಿದ್ದಾರೆ.
ನಂತರ ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಮಿ ಕಬಳಿಸಿದ್ದರು’ ಎಂದು ವರ್ಗೀಸ್ ಅರ್ಜಿಯಲ್ಲಿ ತಿಳಿಸಿದ್ದರು.
ನಿವೇಶನ ಕಳೆದುಕೊಂಡ ಅನಿವಾಸಿ ಭಾರತೀಯರ ನಿಯೋಗ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.