ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ಪ್ರದೇಶದಲ್ಲಿಯೇ ಮಿತಿ ಮೀರಿದ ಸದ್ದು

ರಾಷ್ಟ್ರೀಯ ಮಿತಿ ಮೀರಿದ ಶಬ್ದಮಾಲಿನ್ಯ
Last Updated 16 ನವೆಂಬರ್ 2014, 20:17 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಶಬ್ದಮಾಲಿನ್ಯವೂ ರಾಷ್ಟ್ರೀಯ ಮಿತಿಯನ್ನು ದಾಟಿರುವುದು ಕಂಡುಬಂದಿದೆ. ಕೈಗಾರಿಕಾ ಪ್ರದೇಶಗಳಿಗಿಂತ ವಸತಿ ಪ್ರದೇಶದಲ್ಲಿಯೇ ಶಬ್ದಮಾಲಿನ್ಯ ಹೆಚ್ಚಾಗಿದೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು 2014 ರ ಜನವರಿ ತಿಂಗಳಿನಿಂದ ಜುಲೈವರೆಗೆ ಕೈಗೊಂಡ ಅಧ್ಯಯನ ವರದಿ­ಯಲ್ಲಿ ವಸತಿ ಮತ್ತು ಚರ್ಚ್ಸ್ಟ್ರೀಟ್ನಂಥ ವಾಣಿಜ್ಯ ಪ್ರದೇಶದಲ್ಲಿಯೇ ಶಬ್ದಮಾಲಿನ್ಯ ಅತಿ ಹೆಚ್ಚಾಗಿರುವುದು ಕಂಡು ಬಂದಿದೆ. ಕೈಗಾರಿಕಾ ಪ್ರದೇಶದಲ್ಲಿ ಹಗಲಿನ ಮಿತಿ 75 ಡೆಸಿಬಲ್‌ ಹಾಗೂ ರಾತ್ರಿಯಲ್ಲಿ 70 ಡೆಸಿಬಲ್‌,  ವಾಣಿಜ್ಯ ಪ್ರದೇಶದಲ್ಲಿ ಹಗಲು 65 ಡೆಸಿಬಲ್‌ ಮತ್ತು ರಾತ್ರಿ 55 ಡೆಸಿಬಲ್‌, ವಸತಿ ಪ್ರದೇಶದಲ್ಲಿ ಹಗಲು 55 ಹಾಗೂ ರಾತ್ರಿ 45 ಡೆಸಿಬಲ್‌ಗಳಿರಬಹುದು.

ವಸತಿ ಪ್ರದೇಶವಾದ ಬಿಟಿಎಂ ಲೇಔಟ್‌, ವಾಣಿಜ್ಯ ಪ್ರದೇಶಗಳಾದ ಚರ್ಚ್ಸ್ಟ್ರೀಟ್, ಮಾರತ್‌ಹಳ್ಳಿ, ನಿಸರ್ಗ ಭವನ, ಪರಿಸರ ಭವನ, ಪೀಣ್ಯ ಕೈಗಾರಿಕಾ ಪ್ರದೇಶಗಳಲ್ಲಿ ಮಂಡಳಿಯು ಈ ಅಧ್ಯಯನವನ್ನು ಕೈಗೊಂಡಿತ್ತು. ವಸತಿ ಪ್ರದೇಶವಾದ ಬಿಟಿಎಂ ಲೇ ಔಟ್‌ನಲ್ಲಿ ಜುಲೈ ತಿಂಗಳಿನಲ್ಲಿಯೇ ಹಗಲಿನಲ್ಲಿ 81.3 ಡೆಸಿಬಲ್‌ ಮತ್ತು ರಾತ್ರಿ 71.4 ಡೆಸಿಬಲ್‌ ಇರುವುದು ವರದಿಯಾಗಿದೆ.  ಚರ್ಚ್‌ಸ್ಟ್ರೀಟ್‌ನ ಪರಿಸರ ಭವನದಲ್ಲಿ ಹಗಲು 71.5 ಡೆಸಿಬಲ್‌ ಮತ್ತು ರಾತ್ರಿ  70.9 ಡೆಸಿಬಲ್‌ ಇರುವುದು ವರದಿಯಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ವಾಮನ ಆಚಾರ್ಯ ಅವರು, ‘ಹೆಚ್ಚಿನ ಶಬ್ದಮಾಲಿನ್ಯ­ವಾಗಲು ಸಾಮಾನ್ಯ ನಾಗರಿಕರೇ ಹೆಚ್ಚು ಕಾರಣ. ಶೇ 86 ರಷ್ಟು ಶಬ್ದಮಾಲಿನ್ಯವು ಇಂತಹ ನಾಗರಿಕ ಸಮಾಜದಿಂದಾಗಿಯೇ ಆಗುತ್ತಿದೆ. ಕೈಗಾರಿಕೆಗಳಿಂದ ಶೇ 14 ರಷ್ಟು ಮಾತ್ರ ಶಬ್ದಮಾಲಿನ್ಯವಾಗುತ್ತಿದೆ’ ಎಂದರು.

‘ಇತ್ತೀಚೆಗೆ ವಸತಿ ಪ್ರದೇಶಗಳಲ್ಲಿ ಶಬ್ದ­ಮಾಲಿನ್ಯವು ಹೆಚ್ಚಾಗಿರುವ ಕುರಿತು ಅಧಿಕ ದೂರುಗಳು ಬಂದಿವೆ. ವಸತಿ ಪ್ರದೇಶದಲ್ಲಿ ವಾಣಿಜ್ಯ ಕಾರ್ಯಗಳಿಗೆ ಅವಕಾಶ ನೀಡಿರುವು­ದರಿಂದ ಈ ರೀತಿ ಶಬ್ದಮಾಲಿನ್ಯ ಉಂಟಾ­ಗುತ್ತಿದೆ’ ಎಂದು ಅವರು ವಿವರಿಸಿದರು.
‘ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಳ­ದಿಂದಾಗಿ ಶಬ್ದಮಾಲಿನ್ಯ ಹೆಚ್ಚಾಗಿದೆ. ವಿನಾಕಾ­ರಣ ಕರ್ಕಶವಾಗಿ ಹಾರ್ನ್‌ ಮಾಡುವುದರಿಂದ ಶಬ್ದಮಾಲಿನ್ಯ ಉಂಟಾಗುತ್ತಿದೆ’ ಎಂದು ಅವರು ತಿಳಿಸಿದರು.

‘ಶಬ್ದಮಾಲಿನ್ಯವನ್ನು ನಿಯಂತ್ರಿಸಲು ನಗರ ಪೊಲೀಸ್‌ (ಸಂಚಾರ) ಇಲಾಖೆಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ.  ವಸತಿ ಪ್ರದೇಶದಲ್ಲಿ ವಾಣಿಜ್ಯ ಕೇಂದ್ರಗಳಿಗೆ ಅನುಮತಿ ನೀಡದಂತೆ ಬಿಬಿಎಂಪಿ, ಬಿಡಿಎಗೆ ಪತ್ರ ಬರೆಯಲಾಗಿದೆ’ ಎಂದು ಅವರು ಹೇಳಿದರು.
‘ಕರ್ಕಶವಾಗಿ ಹಾರ್ನ್‌ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ ₨ 100 ರ ಬದಲು ₨ 1,000 ದಂಡ ವಿಧಿಸುವಂತೆ ಹಾಗೂ ಪ್ರತಿ ಸಂಚಾರ ಪೊಲೀಸರಿಗೆ ಶಬ್ದ­ಮಾಲಿನ್ಯ­ವನ್ನು ಅಳತೆ ಮಾಡುವ ಉಪಕರಣ­ವನ್ನು ನೀಡುವಂತೆ ಸೂಚಿಸಲಾಗಿದೆ. ಈ ಉಪಕರಣಗಳಿಂದ ಅವರಿಗೆ ಶಬ್ದದ ಮಟ್ಟವನ್ನು ಅಳೆಯಲು ಮತ್ತು ತಡೆಯಲು ಸಾಧ್ಯ ಆಗುತ್ತದೆ’ ಎಂದರು.

ಮಂಡಳಿಯಿಂದ ಹಲವು ಕ್ರಮ
ಬೆಂಗಳೂರು ನಗರದಲ್ಲಿ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದರಿಂದಾಗಿ ನಗರದಲ್ಲಿ ಮಿತಿಮೀರಿದ ಶಬ್ದಮಾಲಿನ್ಯ ಉಂಟಾಗುತ್ತಿದೆ. ಕೆಲ ವಾಹನಗಳ ಹಾರ್ನ್‌ಗಳು ಕಿವಿಗೆ ಕರ್ಕಶವಾಗಿ ಕೇಳಿಸುವಂತೆ ಇರುತ್ತವೆ. ಇದರಿಂದ ಶಬ್ದಮಾಲಿನ್ಯ ಹೆಚ್ಚಾಗುತ್ತಿದೆ. ಅತಿ ಕರ್ಕಶ ಮಾಡುವ ಹಾರ್ನ್‌ಗಳನ್ನು ನಿಷೇಧಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಈ ಕುರಿತು ನಗರ ಸಂಚಾರ ಇಲಾಖೆಯೊಂದಿಗೆ ಚರ್ಚಿಸಲಾಗಿದೆ. ಹಲವು ಕ್ರಮಗಳನ್ನು ಮಂಡಳಿಯಿಂದ ಕೈಗೊಳ್ಳಲಾಗಿದೆ.
ಡಾ. ವಾಮನ ಆಚಾರ್ಯ, ಅಧ್ಯಕ್ಷ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ.

ಮಂಡಳಿ ವಿಫಲ...
ರಾಜ್ಯ ಮಾಲಿನ್ಯ ನಿಯಂ­ತ್ರಣ ಮಂಡಳಿಯ ಕಾರ್ಯ­ವೈಖರಿಯ ಕುರಿತು ಹೈಕೋರ್ಟ್‌ ತರಾಟೆಗೆ ತೆಗೆದು­ಕೊಂಡಿತ್ತು. ಕೈಗಾರಿಕೆ ಮತ್ತು ವಾಣಿಜ್ಯ ಪ್ರದೇಶ­ಗಳಿಗಿಂತ ವಸತಿ ಪ್ರದೇಶಗಳಲ್ಲಿ ಹೆಚ್ಚಾಗಿರುವ ಶಬ್ದಮಾಲಿನ್ಯದ ಕುರಿತು ಅಸಮಾಧಾನ ವ್ಯಕ್ತಪಡಿಸಿತ್ತು.ನಿಯಮಗಳ ಅನುಸಾರ ಮಂಡಳಿ ಕಾರ್ಯ­ನಿರ್ವಹಿಸದಿದ್ದರೆ ಅದನ್ನು ಸೂಪರ್‌ ಸೀಡ್‌ ಯಾಕೆ ಮಾಡಬಾರದು ಎಂದು ಪ್ರಶ್ನಿಸಿತ್ತು. ನಗರದಲ್ಲಿ ಹೆಚ್ಚಾಗು­ತ್ತಿರುವ ಶಬ್ದ ಮಾಲಿನ್ಯವನ್ನು ನಿಯಂತ್ರಿ­ಸಲು ಮಾಲಿನ್ಯ ನಿಯಂತ್ರಣ ಮಂಡಳಿಗೆ ಆದೇಶ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT