ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ | ₹15 ಕೋಟಿ ಗಾಂಜಾ ಜಪ್ತಿ, ಜಾಲ ನಾಶ: ಚನ್ನಬಸವಣ್ಣ ಎಸ್‌.ಎಲ್.

2023ರಲ್ಲಿ ಶೇ 14ರಷ್ಟು ಅಪರಾಧ ಪ್ರಕರಣಗಳಲ್ಲಿ ಇಳಿಕೆ; 800 ಮೊಬೈಲ್‌ಗಳ ಪತ್ತೆ
Published 2 ಜನವರಿ 2024, 15:46 IST
Last Updated 2 ಜನವರಿ 2024, 15:46 IST
ಅಕ್ಷರ ಗಾತ್ರ

ಬೀದರ್‌: ‘ಜಿಲ್ಲೆಯ ವಿವಿಧೆಡೆ 2023ನೇ ಸಾಲಿನಲ್ಲಿ ಒಟ್ಟು ₹15.35 ಕೋಟಿ ಮೌಲ್ಯದ 1,513 ಕೆ.ಜಿ ಗಾಂಜಾ ಜಪ್ತಿ ಮಾಡಲಾಗಿದ್ದು, ಅದರ ಜಾಲವನ್ನು ಪತ್ತೆ ಹಚ್ಚಿ ನಾಶಪಡಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್. ತಿಳಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2022ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ₹1.94 ಕೋಟಿ ಮೌಲ್ಯದ ಗಾಂಜಾ ಜಪ್ತಿ ಮಾಡಲಾಗಿತ್ತು. ಈ ವರ್ಷ ಅದಕ್ಕಿಂತ ಹೆಚ್ಚಿನ ಪ್ರಮಾಣದ ಗಾಂಜಾ ವಶಕ್ಕೆ ಪಡೆಯಲಾಗಿದೆ. ಇದು ಸಾಧ್ಯವಾಗಿದ್ದು ರೌಡಿ ನಿಗ್ರಹ ದಳ ಮತ್ತು ಮಾದಕ ವಸ್ತು ಪ್ರತಿಬಂಧಕ ದಳದ ಚುರುಕಿನ ಕೆಲಸದಿಂದ ಎಂದು ವಿವರಿಸಿದರು.

2022ನೇ ಸಾಲಿನಲ್ಲಿ ಸಂಘಟಿತ ಅಪರಾಧದಡಿ ಒಟ್ಟು ₹2.71 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿತ್ತು. 2023ನೇ ಸಾಲಿನಲ್ಲಿ ಒಟ್ಟು ₹22.11 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿ 3,104 ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

ಆಂಧ್ರ ಪ್ರದೇಶ, ಒಡಿಶಾ ರಾಜ್ಯಗಳು ಗಾಂಜಾದ ಪ್ರಮುಖ ಮೂಲವಾಗಿವೆ. ನಕ್ಸಲ್‌ ಪೀಡಿತ ಪ್ರದೇಶದಲ್ಲಿ ಇದನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಬೀದರ್‌ ಜಿಲ್ಲೆ ಅಂತರರಾಜ್ಯ ಗಡಿ ಹಂಚಿಕೊಂಡಿರುವುದರಿಂದ ಜಿಲ್ಲೆ ಮೂಲಕ ಸಾಗಾಟ ಮಾಡಲಾಗುತ್ತದೆ. ಕಟ್ಟುನಿಟ್ಟಿನ ಕ್ರಮಗಳಿಂದ ಈ ಮಾರ್ಗ ಬಂದ್‌ ಮಾಡಲಾಗಿದೆ. ನೆರೆಯ ರಾಜ್ಯದ ಪೊಲೀಸರೊಂದಿಗೆ ಉತ್ತಮ ಸಂಪರ್ಕ ಸಾಧಿಸಲಾಗಿದೆ. ಇತ್ತೀಚೆಗೆ ತೆಲಂಗಾಣ ರಾಜ್ಯ ಪೊಲೀಸರು ನಮ್ಮ ಸಹಕಾರಕ್ಕೆ ಅಭಿನಂದನಾ ಪತ್ರ ಕೂಡ ಬರೆದಿದ್ದಾರೆ ಎಂದರು.

2022ನೇ ಸಾಲಿಗೆ ಹೋಲಿಸಿದರೆ 2023ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಕೊಲೆ, ಅತ್ಯಾಚಾರ, ಗಲಭೆ ಸೇರಿದಂತೆ ಇತರೆ ಅಪರಾಧ ಪ್ರಕರಣಗಳು ಶೇ 14ರಷ್ಟು ಕಡಿಮೆಯಾಗಿವೆ. ಸ್ವತ್ತಿನ ಅಪರಾಧಗಳಾದ ಸುಲಿಗೆ, ದರೋಡೆ ಪ್ರಕರಣಗಳು ಶೇ 60ರಷ್ಟು ತಗ್ಗಿವೆ. ಜಿಲ್ಲೆಯಲ್ಲಿ ಕೈಗೊಂಡಿದ್ದ ‘ಬ್ರೋಕನ್‌ ವಿಂಡೋ’ ಕಾರ್ಯಾಚರಣೆಯಿಂದ ಅಪರಾಧಗಳು ತಗ್ಗಿವೆ. ಹಲವು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ 77 ಜನ ತಲೆಮರಿಸಿಕೊಂಡಿದ್ದರು. ಅವರನ್ನು ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. 2023ನೇ ಸಾಲಿನಲ್ಲಿ 800 ಮೊಬೈಲ್‌ಗಳನ್ನು ಪತ್ತೆ ಹಚ್ಚಲಾಗಿದ್ದು, ಈಗಾಗಲೇ 305 ಮೊಬೈಲ್‌ಗಳನ್ನು ವಾರಸುದಾರರಿಗೆ ಹಿಂತಿರುಗಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.

ಸಂಘಟಿತ ಅಪರಾಧಗಳನ್ನು ತಡೆಗಟ್ಟಲು ರೌಡಿ ನಿಗ್ರಹ ದಳ ಮತ್ತು ಮಾದಕ ವಸ್ತು ಪ್ರತಿಬಂಧಕ ದಳ ರಚಿಸಿ ಹೆಚ್ಚಿನ ದಾಳಿಗಳನ್ನು ಮಾಡಿ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದೇವೆ. ಅಕ್ರಮ ಪಡಿತರ ಅಕ್ಕಿಗೆ ಸಂಬಂಧಿಸಿ 93 ಪ್ರಕರಣಗಳನ್ನು ದಾಖಲಿಸಿ ಒಟ್ಟು 267 ಜನರನ್ನು ವಶಕ್ಕೆ ಪಡೆಡೆಯಲಾಗಿದೆ. 26 ಸೈಬರ್ ವಂಚನೆ ಪ್ರಕರಣಗಳನ್ನು ಭೇದಿಸಿ ₹51.83 ಲಕ್ಷ ವಾರಸುದಾರರಿಗೆ ಹಿಂತಿರುಗಿಸಲಾಗಿದೆ ಎಂದರು.

ಡಿಸೆಂಬರ್‌ ತಿಂಗಳಲ್ಲಿ ಜಿಲ್ಲೆಯ ವಿವಿಧ ಪೊಲಿಸ್‌ ಠಾಣೆಗಳಲ್ಲಿ ದಾಖಲಾದ 9 ಪ್ರಕರಣಗಳನ್ನು ಭೇದಿಸಿ 17 ಜನ ಆರೋಪಿಗಳನ್ನು ವಶಕ್ಕೆ ಪಡೆದು, ₹90 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಇದರಲ್ಲಿ ಬೈಕ್‌, ಬೈಸಿಕಲ್‌ಗಳು ಕೂಡ ಸೇರಿವೆ ಎಂದು ತಿಳಿಸಿದರು.

ಹೆಚ್ಚುವರಿ ಎಸ್ಪಿಗಳಾದ ಮಹೇಶ ಮೇಘಣ್ಣನವರ, ಚಂದ್ರಕಾಂತ ಪೂಜಾರಿ, ಡಿವೈಎಸ್ಪಿಗಳಾದ ಶಿವನಗೌಡ ಪಾಟೀಲ, ಗಾಂಧಿ ಗಂಜ್ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಹನುಮರೆಡ್ಡೆಪ್ಪಾ, ಹುಮನಾಬಾದ್‌ ಇನ್‌ಸ್ಪೆಕ್ಟರ್‌ ಗುರು ಪಾಟೀಲ ಹಾಜರಿದ್ದರು.

Cut-off box - 15 ಜನರ ಗಡಿಪಾರಿಗೆ ಪ್ರಸ್ತಾವ ‘ಗಂಭೀರ ಸ್ವರೂಪದ ವಿವಿಧ ಅಪರಾಧ ಪ್ರಕರಣಗಳಲ್ಲಿ ಶಾಮಿಲಾದ 15 ಜನರನ್ನು ಬೀದರ್‌ ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಜಿಲ್ಲಾಧಿಕಾರಿಗೆ ಪ್ರಸ್ತಾವ ಕಳಿಸಲಾಗಿದೆ. ಇಬ್ಬರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಜರುಗಿಸಲು ಕೋರಲಾಗಿದೆ’ ಎಂದು ಎಸ್ಪಿ ಚನ್ನಬಸವಣ್ಣ ಎಸ್‌.ಎಲ್‌. ತಿಳಿಸಿದರು.

Cut-off box - ದಂಡದ ರೂಪದಲ್ಲಿ 10 ಸಾವಿರ ಹೆಲ್ಮೆಟ್‌ 317 ಜನರ ಡಿ.ಎಲ್‌. ರದ್ದತಿಗೆ ಆರ್‌ಟಿಗೆ ಪತ್ರ ‘ಬೀದರ್‌ ಜಿಲ್ಲೆಯಲ್ಲಿ ಕಡ್ಡಾಯವಾಗಿ ಹೆಲ್ಮೆಟ್‌ ಜಾರಿಗೊಳಿಸಲಾಗಿದೆ. ಇದನ್ನು ಜಾರಿಗೆ ತಂದ ನಂತರ ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ ಬೈಕ್‌ ಸವಾರರನ್ನು ತಡೆದು ದಂಡದ ಮೊತ್ತದಲ್ಲಿ ಸ್ಥಳದಲ್ಲಿಯೇ 10 ಸಾವಿರ ಹೆಲ್ಮೆಟ್‌ಗಳನ್ನು ಕೊಡಿಸಲಾಗಿದೆ. . ರಸ್ತೆ ಸುರಕ್ಷತೆ ಬಗ್ಗೆ ವಿಶೇಷ ಅಭಿಯಾನ ನಡೆಸಿದ್ದರಿಂದ ಅಪಘಾತಗಳಲ್ಲಿ ಶೇ 14ರಷ್ಟು ಕುಸಿತ ಕಂಡಿದೆ’ ಎಂದು ಎಸ್ಪಿ ಚನ್ನಬಸವಣ್ಣ ಎಸ್‌.ಎಲ್‌. ತಿಳಿಸಿದರು. ಪದೇ ಪದೇ ರಸ್ತೆ ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ 317 ಜನರ ಡಿ.ಎಲ್‌. ಕಾಯಂ ಆಗಿ ರದ್ದುಗೊಳಿಸುವಂತೆ ಆರ್‌ಟಿಒಗೆ ಪತ್ರ ಬರೆಯಲಾಗಿದೆ. ಇಷ್ಟೇ ಅಲ್ಲ ಪೊಲೀಸ್‌ ಚೌಕ್‌ನಲ್ಲಿ ಸಂಚಾರ ನಿಯಮ ಪಾಲನೆಗೆ ಸಂಬಂಧಿಸಿದಂತೆ ‘ಮಿನಿಯೇಚರ್‌’ಗಳನ್ನು ಇಡಲಾಗುವುದು. ಆಟೊಮೊಬೈಲ್‌ನವರು ಮಾಡಿಕೊಡಲು ಆಸಕ್ತಿ ತೋರಿದ್ದಾರೆ ಎಂದರು.

Cut-off box - ಕಾಲೇಜುಗಳಲ್ಲಿ ಮಾದಕ ವಸ್ತು ವಿರೋಧಿ ಸಮಿತಿಗಳ ರಚನೆ ‘ಬೀದರ್‌ ಜಿಲ್ಲೆಯಲ್ಲಿ ಮಾದಕ ವಸ್ತು ಸಾಗಾಟವನ್ನು ದೊಡ್ಡ ಪ್ರಮಾಣದಲ್ಲಿ ನಿಯಂತ್ರಿಸಲಾಗಿದೆ. ಶಾಲಾ–ಕಾಲೇಜುಗಳನ್ನು ಗುರಿಯಾಗಿರಿಸಿ ಮಾದಕ ವಸ್ತು ಸರಬರಾಜು ಮಾಡಲಾಗುತ್ತಿದೆ. ಅದರ ಮೂಲ ಬೇರು ಕಿತ್ತು ಹಾಕಿದರೆ ಪೂರೈಕೆ ನಿಂತು ಹೋಗುತ್ತದೆ. ಅದಕ್ಕಾಗಿ ಜಿಲ್ಲೆಯ ಎಲ್ಲ ಶಾಲಾ–ಕಾಲೇಜುಗಳಲ್ಲಿ ಮಾದಕ ವಸ್ತು ವಿರೋಧಿ ಸಮಿತಿ ರಚಿಸಲಾಗುತ್ತದೆ’ ಎಂದು ಎಸ್ಪಿ ಚನ್ನಬಸವಣ್ಣ ಎಸ್‌.ಎಲ್‌. ತಿಳಿಸಿದರು. ಈ ತಿಂಗಳಿಂದ ಸಮಿತಿಗಳನ್ನು ರಚಿಸಲಾಗುವುದು. ಶಾಲಾ–ಕಾಲೇಜಿನ ಪ್ರಾಚಾರ್ಯರು ವಿದ್ಯಾರ್ಥಿಗಳು ಆ ಸಮಿತಿಯಲ್ಲಿ ಇರುತ್ತಾರೆ. ಮಾದಕ ವಸ್ತುಗಳಿಗೆ ಸಂಬಂಧಿಸಿ ಯಾವುದೇ ಮಾಹಿತಿ ಇದ್ದರೂ ಸಮಿತಿಯಲ್ಲಿ ಹಂಚಿಕೊಳ್ಳುತ್ತಾರೆ. ಅದರ ಮೇಲೆ ಪೊಲೀಸರು ಕ್ರಮ ಜರುಗಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

Cut-off box - ಬೀದರ್‌ ಉಪವಿಭಾಗ ಉತ್ತಮ ಕೆಲಸ ಪ್ರಸಕ್ತ ಸಾಲಿನಲ್ಲಿ ಸಂಘಟಿತ ಅಪರಾಧಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್‌ ಇಲಾಖೆಯ ಬೀದರ್‌ ಉಪವಿಭಾಗ ಉತ್ತಮ ಕೆಲಸ ಮಾಡಿದೆ. 2023ರಲ್ಲಿ ಶೇ 79ರಷ್ಟು ಪ್ರಕರಣಗಳನ್ನು ಭೇದಿಸಿದ್ದಾರೆ. ಡಿವೈಎಸ್ಪಿ ಶಿವನಗೌಡ ಸೇರಿದಂತೆ ಅವರ ವ್ಯಾಪ್ತಿಯ ಎಲ್ಲ ಅಧಿಕಾರಿಗಳಿಗೆ ಪ್ರಶಂಸಾ ಪತ್ರ ನೀಡಲಾಗಿದೆ ಎಂದು ಎಸ್ಪಿ ಚನ್ನಬಸವಣ್ಣ ಎಸ್‌.ಎಲ್‌. ತಿಳಿಸಿದರು. ಬೀದರ್‌ ತಾಲ್ಲೂಕಿನ ಅಲಿಯಂಬರ್‌ನಲ್ಲಿ ಇತ್ತೀಚೆಗೆ ನಡೆದ ಅಮಿತ್‌ ಎಂಬಾತನ ಕೊಲೆ ಪ್ರಕರಣ ಭೇದಿಸುವುದು ಇಲಾಖೆಗೆ ಸವಾಲಿನ ಕೆಲಸವಾಗಿತ್ತು. ಅದನ್ನು ಬೀದರ್‌ ಉಪವಿಭಾಗದ ಪೊಲೀಸರು ಬಹಳ ದಕ್ಷವಾಗಿ ನಿಭಾಯಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT