ರಾಜ್ಯದಲ್ಲಿ 25 ಪುಕ್ಕಲು ಸಂಸದರು: ಈಶ್ವರ ಖಂಡ್ರೆ

ಬೀದರ್: ‘ರಾಜ್ಯದಲ್ಲಿ 25 ಪುಕ್ಕಲು ಸಂಸದರು ಇದ್ದಾರೆ. ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಎದುರು ನಿಂತು ಮಾತನಾಡುವ ಎದೆಗಾರಿಕೆ ಇಲ್ಲ. ಸರ್ವಪಕ್ಷಗಳ ನಿಯೋಗ ಒಯ್ಯುವ ಕಾರ್ಯವನ್ನೂ ಮಾಡಿಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವಾಗ್ದಾಳಿ ನಡೆಸಿದರು.
‘ಕೇಂದ್ರದಲ್ಲಿ ಅಧಿಕಾರಿದಲ್ಲಿರುವ ಬಿಜೆಪಿ ಮುಖಂಡರ ಅಸಮರ್ಥ ಕಾರ್ಯದಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೋಟ್ಯಂತರ ಯುವಜನರು ಉದ್ಯೋಗ ಕಳೆದುಕೊಂಡಿದ್ದಾರೆ. 45 ವರ್ಷಗಳ ಇತಿಹಾಸದಲ್ಲಿ ಅತಿ ಹೆಚ್ಚು ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ದೇಶದ ಜಿಡಿಪಿ ಕುಸಿತ ಕಂಡಿದೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
‘ಕೇಂದ್ರ ಸರ್ಕಾರವು ರಾಜ್ಯಕ್ಕೆ ಜಿಎಸ್ಟಿ ಪಾಲು ಕೊಡುವಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಹೆಚ್ಚಿನ ತೆರಿಗೆ ಪಾವತಿಸಿದರೂ ಕರ್ನಾಟಕದತ್ತ ತಾತ್ಸಾರದಿಂದ ನೋಡುತ್ತಿದೆ. ರಾಜ್ಯದ ಬಿಜೆಪಿ ಮುಖಂಡರು ಕೇಂದ್ರ ಮುಖಂಡರನ್ನು ಪ್ರಶ್ನಿಸುತ್ತಿಲ್ಲ’ ಎಂದು ಅವರು ಟೀಕಿಸಿದರು.
‘₹50 ಸಾವಿರ ಕೋಟಿ ಪ್ಯಾಕೇಜ್ ಕೇಳಿದರೆ ಕೇಂದ್ರ ಸರ್ಕಾರ ₹ 1800 ಕೋಟಿ ಮಾತ್ರ ಕೊಟ್ಟಿದೆ. ಪ್ರವಾಹದಿಂದ ಹಾನಿಯಾದರೂ ಪರಿಹಾರ ಕೊಟ್ಟಿಲ್ಲ. ರಾಜ್ಯದ 50 ಸಾವಿರ ಶಾಲೆಗಳಲ್ಲಿ 1 ಕೋಟಿ ವಿದ್ಯಾರ್ಥಿಗಳು ಓದುತ್ತಿದ್ದಾರೆ. 2 ಲಕ್ಷ ಶಿಕ್ಷಕರು ವೇತನ ಮತ್ತು ಪರಿಹಾರವಿಲ್ಲದೇ ಪರದಾಡುತ್ತಿದ್ದಾರೆ’ ಎಂದು ಹೇಳಿದರು.
‘ಭಾರತವು ಅತಿ ಹೆಚ್ಚು ಸೋಂಕು ಹೊಂದಿರುವ ವಿಶ್ವದ ಎರಡನೇ ದೇಶವಾಗಿದೆ. ಕೋವಿಡ್ ನಿಯಂತ್ರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿವೆ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.