ಬೀದರ್: ವಾಯುಮಾಲಿನ್ಯ ನಿಯಂತ್ರಣದ ಕುರಿತು ಅರಿವು ಮೂಡಿಸುವ ಜನಜಾಗೃತಿ ಜಾಥಾದ ಎಲ್ಇಡಿ ವಾಹನವನ್ನು ನಗರದಲ್ಲಿ ಬುಧವಾರ ಸ್ವಾಗತಿಸಲಾಯಿತು.
ಬೆಂಗಳೂರಿನ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರ ಕಚೇರಿಯಿಂದ ಬಂದಿರುವ ಜಾಗೃತಿ ವಾಹನದ ಜಿಲ್ಲಾ ಸಂಚಾರಕ್ಕೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರಗೇಂದ್ರ ಬಿ. ಶಿರೋಳಕರ ಅವರು ಚಾಲನೆ ನೀಡಿದರು.
ಬಳಿಕ ವಾಹನವು ನಗರದ ಕೇಂದ್ರ ಬಸ್ ನಿಲ್ದಾಣ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಗುಂಪಾ, ಶಿವನಗರ, ನೌಬಾದ್ನಲ್ಲಿ ಸಂಚರಿಸಿತು. ವಿಡಿಯೊ ಮೂಲಕ ವಾಯುಮಾಲಿನ್ಯದ ಕುರಿತು ಅರಿವು ಮೂಡಿಸಲಾಯಿತು.
ಹಿರಿಯ ಮೋಟಾರ್ ವಾಹನ ಇನ್ಸ್ಪೆಕ್ಟರ್ ಶಿವರಾಜ ಜಮಾದಾರ, ಬೀದರ್ ಮೋಟಾರ್ ವಾಹನ ತರಬೇತಿ ಶಾಲೆಯ ಅಧ್ಯಕ್ಷ ಪ್ರಕಾಶ ಗುಮ್ಮೆ, ಕಾರ್ಯದರ್ಶಿ ರಾಜಕುಮಾರ ಬಿರಾದಾರ, ಸಹ ಕಾರ್ಯದರ್ಶಿ ಸಾಗರ ಉಂಡೆ, ಸುರೇಶ ಗಾಯಕವಾಡ, ಅಹಮ್ಮದ್ ಖಾನ್, ಸುಧಾಕರ ಬಿರಾದಾರ ಇತರರಿದ್ದರು.