ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌: ಬಸವಗಿರಿಯಲ್ಲಿ ಮರೆಯಾದ ಬಸವತತ್ವದ ‘ಅಕ್ಕ’

ಬಸವತತ್ವದ ವಿಧಿ ವಿಧಾನದ ಪ್ರಕಾರ ಬಸವಗಿರಿಯ ಪುರುಷ ಕಟ್ಟೆ ಸಮೀಪ ಅಕ್ಕನ ಅಂತ್ಯಕ್ರಿಯೆ
Published 25 ಮೇ 2024, 7:38 IST
Last Updated 25 ಮೇ 2024, 7:38 IST
ಅಕ್ಷರ ಗಾತ್ರ

ಬೀದರ್‌: ಹಚ್ಚ ಹಸಿರಿನ ನಿಸರ್ಗದ ಮಡಿಲಲ್ಲಿರುವ ನಗರದ ಪಾಪನಾಶದ ಬಸವಗಿರಿಯ ಪುರುಷ ಕಟ್ಟೆ ಸಮೀಪದ ಸಮಾಧಿಯಲ್ಲಿ ಲಿಂಗ ಮತ್ತು ವಿಭೂತಿ ನಡುವೆ ಬಸವತತ್ವದ ಪರಿಚಾರಕಿ ‘ಅಕ್ಕ’ ಅನ್ನಪೂರ್ಣ ತಾಯಿ (61) ಅಂತ್ಯಕ್ರಿಯೆ ಶುಕ್ರವಾರ ಸಂಜೆ ಅಪಾರ ಬಸವಭಕ್ತರ ನಡುವೆ ಜರುಗಿತು.

ಅನಾರೋಗ್ಯದಿಂದ ಹೈದರಾ ಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾಗಿದ್ದ ‘ಅಕ್ಕ’ನವರ ಪಾರ್ಥೀವ ಶರೀರವನ್ನು ಸಂಜೆಯೇ ಬಸವಗಿರಿಯಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಸುದ್ದಿ ತಿಳಿದು ನಾಡಿನ ವಿವಿಧ ಭಾಗಗಳಿಂದ ಬಸವ ಭಕ್ತರು ಗುರುವಾರ ರಾತ್ರಿಯಿಂದಲೇ ಬಸವಗಿರಿಯತ್ತ ದೌಡಾಯಿಸಿದರು. ಶುಕ್ರವಾರ ಬೆಳಕು ಹರಿಯುತ್ತಿದ್ದಂತೆ  ಸಂಖ್ಯೆ ಹೆಚ್ಚಾಯಿತು. ಸಂಜೆವರೆಗೂ ಇದೇ ಪರಿಸ್ಥಿತಿ ಇತ್ತು.

ಮಧ್ಯಾಹ್ನ 3 ಗಂಟೆ ನಂತರ ಧಾರ್ಮಿಕ ವಿಧಿ ವಿಧಾನಗಳು ಪ್ರಾರಂಭಗೊಂಡವು. ಇಡೀ ಜೀವನ ಶ್ವೇತ ವರ್ಣದ ಬಟ್ಟೆಗಳನ್ನುಟ್ಟು ಸವೆಸಿದ ಅಕ್ಕನವರಿಗೆ ಕೇಸರಿ ಬಣ್ಣದ ಸೀರೆ ತೊಡಿಸಿ, ಲಿಂಗಾಕಾರದ ಪೀಠದ ಮೇಲೆ ಕೂರಿಸಲಾಯಿತು.

ಕೊರಳಲ್ಲಿ ಲಿಂಗ ಹಾಕಿ, ಮಾಲಾರ್ಪಣೆ ಮಾಡಿ, ಕಿರೀಟ ಧಾರಣೆ ಮಾಡಲಾಯಿತು. ಅವರ ತೊಡೆಯ ಮೇಲೆ ವಚನ ಸಾಹಿತ್ಯ ಇಡಲಾಯಿತು. ವಿವಿಧ ಭಾಗದ ಪೂಜ್ಯರು ವಚನ ಪಠಣ ಕಾರ್ಯಕ್ರಮ ನಡೆಸಿಕೊಟ್ಟರು. ನೂರಾರು ಭಕ್ತರು ಇದರಲ್ಲಿ ಪಾಲ್ಗೊಂಡರು.

ಆನಂತರ ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು  ಅಕ್ಕನವರಿಗೆ ತೊಡಿಸಿದ ಕಿರೀಟ, ರುದ್ರಾಕ್ಷಿ ಮಾಲೆ ತೆಗೆದು ಕ್ರಮವಾಗಿ ಪ್ರಭು ಸ್ವಾಮೀಜಿಯವರಿಗೆ ಹಾಗೂ ಅಕ್ಕ ಗಂಗಾಂಬಿಕೆ ಅವರಿಗೆ ತೊಡಿಸಿದರು. ಆಗ ಭಕ್ತಗಣ ಭಾವುಕರಾಗಿ ಜಯಘೋಷ ಹಾಕಿದರು.

ಇದಾದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ, ಕೇಂದ್ರ ಸಚಿವ ಭಗವಂತ ಖೂಬಾ, ಸಂಸದ ಅಣ್ಣಾಸಾಹೇಬ್‌ ಜೊಲ್ಲೆ, ಮಾಜಿಸಚಿವೆ ಶಶಿಕಲಾ ಜೊಲ್ಲೆ ಸೇರಿದಂತೆ ಇತರೆ ಗಣ್ಯರು, ಮಠಾಧೀಶರು ಅಕ್ಕನವರು ಬಸವತತ್ವದ ಪ್ರಚಾರ, ಪ್ರಸಾರಕ್ಕಾಗಿ ಮಾಡಿದ ಕಾರ್ಯಗಳನ್ನು ಮೆಲುಕು ಹಾಕಿದರು.

ಆನಂತರ ಮಹಿಳೆಯರು ತಲೆಯ ಮೇಲೆ ವಚನ ಸಾಹಿತ್ಯವನ್ನು ಹೊತ್ತುಕೊಂಡು ಹೆಜ್ಜೆ ಹಾಕಿದರೆ, ಅದರ ಹಿಂದೆ ಅಕ್ಕನವರನ್ನು ಮೆರವಣಿಗೆಯಲ್ಲಿ ಸಮಾಧಿಯ ವರೆಗೆ ಕೊಂಡೊಯ್ಯಲಾಯಿತು.

ಈ ವೇಳೆ ಜಯಘೋಷಗಳು ಮೊಳಗಿದವು. ಲಿಂಗಾಕಾರದ ಸಮಾಧಿಯಲ್ಲಿ ಅಕ್ಕನವರನ್ನು ಕೂರಿಸಿ, ವಿಭೂತಿಗಳನ್ನು ತುಂಬಿ, ವಚನಗಳನ್ನು ಪಠಿಸುವುದರ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಯಿತು. ಬಸವಗಿರಿಯ ಪ್ರಶಾಂತ ವಾತಾವರಣದಲ್ಲಿ ಅಕ್ಕ ಚಿರನಿದ್ರೆಗೆ ಜಾರಿದರು.

ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಸ್ವಾಮೀಜಿ, ಕೂಡಲಸಂಗಮ ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ, ಭಾಲ್ಕಿ ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಹುಲಸೂರಿನ ಶಿವಾನಂದ ಸ್ವಾಮೀಜಿ, ಅಕ್ಕ ಗಂಗಾಂಬಿಕೆ, ಪ್ರಭು ಸ್ವಾಮೀಜಿ, ಬಸವಕಲ್ಯಾಣದ ಸಿದ್ದರಾಮೇಶ್ವರ ಸ್ವಾಮೀಜಿ, ಮಲ್ಲಯ್ಯನಗಿರಿಯ ಬಸವಲಿಂಗ ಅವಧೂತರು, ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಬಸವರಾಜ ಧನ್ನೂರ, ಭಾರತೀಯ ಬಸವ ಬಳಗದ ಬಾಬುವಾಲಿ, ಜೆಡಿಎಸ್‌ ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ, ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ,ಜಿಲ್ಲಾಧ್ಯಕ್ಷ ಸೋಮಶೇಖರ ಪಾಟೀಲ, ಬಸವ ಕೇಂದ್ರದ ಜಿಲ್ಲಾಧ್ಯಕ್ಷ ಶರಣಪ್ಪ ಮಿಠಾರೆ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಅಕ್ಕ ಅನ್ನಪೂರ್ಣ ತಾಯಿ ಅವರು ಅಕ್ಕಮಹಾದೇವಿಯಂತೆ ಮನೆ ಮಠ ತೊರೆದು ಸಮಾಜದ ಒಳಿತಿಗಾಗಿ ಉತ್ತಮ ಕೆಲಸ ಮಾಡಿರುವುದರಿಂದಲೇ ನಾಡಿನ ವಿವಿಧ ಭಾಗದ ಬಸವಭಕ್ತರು ಬಂದು ಗೌರವ ಸಮರ್ಪಿಸಿದ್ದಾರೆ. ಅವರ ತ್ಯಾಗಕ್ಕೆ ಸಂದ ಗೌರವವಿದು.
–ನಿಜಗುಣಾನಂದ ಸ್ವಾಮೀಜಿ, ಬೈಲೂರು ನಿಷ್ಕಲ ಮಂಟಪ ಬೈಲಹೊಂಗಲ
ಪ್ರಖರ ವೈಚಾರಿಕತೆಯ ಪ್ರತಿರೂಪವಾಗಿದ್ದ ಅಕ್ಕನವರು ಗೊಡ್ಡು ಸಂಪ್ರದಾಯ ಮೂಢನಂಬಿಕೆ ಕಂದಚಾರಗಳನ್ನು ಧಿಕ್ಕರಿಸಿದವರು. ಬಸವತತ್ವದ ಪ್ರಸಾರಕ್ಕಾಗಿ ಅವರು ಮಾಡಿದ ಕಾರ್ಯ ಸಮಾಜ ಸದಾ ನೆನಪಿನಲ್ಲಿ ಇಟ್ಟುಕೊಳ್ಳುತ್ತದೆ.
–ಶಿವಾನಂದ ಸ್ವಾಮೀಜಿ, ಹುಲಸೂರ
ಬಸವ ಸೇವಾ ಪ್ರತಿಷ್ಠಾನ ಹಾಗೂ ಲಿಂಗಾಯತ ಮಹಾ ಮಠದ ಮೂಲಕ ಬಸವ ತತ್ವ ಪ್ರಚಾರ ಕಾರ್ಯವನ್ನು ಅಕ್ಕನವರು ಮಾಡಿದ್ದಾರೆ. ಬಸವಗಿರಿ ಅವರ ಕಾಯಕದ ಕೇಂದ್ರವಾಗಿತ್ತು. ಈಗ ಅಲ್ಲೇ ಅವರು ಸಮಾಧಿಯಾಗಿದ್ದಾರೆ.
–ಬಸವರಾಜ ಧನ್ನೂರ, ಅಧ್ಯಕ್ಷ , ಜಾಗತಿಕ ಲಿಂಗಾಯತ ಮಹಾಮಠ ಜಿಲ್ಲಾ ಘಟಕ
ಕಣ್ಣೀರು ಹಾಕಿದ ಬಸವಲಿಂಗ ಪಟ್ಟದೇವರು
‘ಅಕ್ಕ’ ಅನ್ನಪೂರ್ಣ ತಾಯಿ ಅವರು ಬಸವತತ್ವದ ಪ್ರಚಾರ ಪ್ರಸಾರಕ್ಕಾಗಿ ಮಾಡಿದ ಕಾರ್ಯಗಳನ್ನು ಮೆಲುಕು ಹಾಕುವಾಗ ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಭಾವುಕರಾಗಿ ಕಣ್ಣೀರು ಹಾಕಿದರು. ಕೆಲ ಕ್ಷಣ ಅವರಿಂದ ಮಾತು ಹೊರಡಲಿಲ್ಲ. ಅಲ್ಲಿಯೇ ಇದ್ದ ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು ಅವರಿಗೆ ಸಮಾಧಾನ ಹೇಳಿದರು. ದುಃಖದ ಸಂದರ್ಭದಲ್ಲಿ ಭಕ್ತಗಣ ಇನ್ನಷ್ಟು ದುಃಖಕ್ಕೆ ಒಳಗಾಯಿತು. ‘ಬಸವತತ್ವದ ಪ್ರಸಾರಕ್ಕಾಗಿ ಅಕ್ಕ ಅನ್ನಪೂರ್ಣ ತಾಯಿ ಮಾಡಿದ ಕಾರ್ಯ ಅಷ್ಟಿಷ್ಟಲ್ಲ. ‘ವಚನ ವಿಜಯೋತ್ಸವ’ ಕಾರ್ಯಕ್ರಮದ ಮೂಲಕ ನಾಡಿನ ಜನತೆಯನ್ನು ಸೂಜಿಗಲ್ಲಿನಂತೆ ಆಕರ್ಷಿಸಿದ್ದರು. ಕೆಲ ಭಿನ್ನಾಭಿಪ್ರಾಯಗಳಿಂದ ಆ ಕಾರ್ಯಕ್ರಮ ನಿಂತಿದೆ. ಭಿನ್ನಾಭಿಪ್ರಾಯಗಳನ್ನು ಮರೆತು ಆ ಕಾರ್ಯಕ್ರಮಕ್ಕೆ ಪುನಃ ಚಾಲನೆ ಕೊಡಬೇಕಿದೆ’ ಎಂದು ಪಟ್ಟದ್ದೇವರು ಹೇಳಿದಾಗ ಕರತಾಡನ ಮುಗಿಲು ಮುಟ್ಟಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT