ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗುವಿನ ಕೈಮುರಿದ ತಾಯಿ, ಪ್ರಿಯತಮ

ಬಾಲಕಿಯ ತಂದೆಯಿಂದ ಪೊಲೀಸರಿಗೆ ದೂರು
Last Updated 21 ಮಾರ್ಚ್ 2020, 15:17 IST
ಅಕ್ಷರ ಗಾತ್ರ

ಬೀದರ್: ಮೂವತ್ತು ವರ್ಷದ ವಿವಾಹಿತೆ ಹಾಗೂ ಆಕೆಯ ಪ್ರಿಯಕರ ಸೇರಿ ಪ್ರೇಮ ಸಲ್ಲಾಪಕ್ಕೆ ಅಡ್ಡಿಯಾಗುತ್ತಿದ್ದಾಳೆ ಎನ್ನುವ ಕಾರಣಕ್ಕೆ ಆರು ವರ್ಷದ ಮಗುವಿನ ಮೇಲೆ ಹಲ್ಲೆ ನಡೆಸಿ, ಸಿಗರೇಟಿನಿಂದ ಸುಟ್ಟು ಗಾಯಗೊಳಿಸಿದ ಆರೋಪದ ಮೇಲೆ ಜೈಲು ಸೇರಿದ್ದಾರೆ.

ಬಾಲಕಿಯ ಮೈತುಂಬ ಚಿವುಟಿರುವ ಹಾಗೂ ಸಿಗರೇಟ್‌ನಿಂದ ಸುಟ್ಟಿರುವ ಗಾಯಗಳಿವೆ. ಹುಮನಾಬಾದ್‌ ಪೊಲೀಸರು ಬಾಲಕಿಯ ತಾಯಿಯನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ಪ್ರಿಯಕರನಿಗೆ 18 ವರ್ಷ ಪೂರ್ಣಗೊಳ್ಳದ ಕಾರಣ ಬಾಲಕರ ನಿರೀಕ್ಷಣಾ ಮಂದಿರಕ್ಕೆ ಕಳಿಸಲಾಗಿದೆ.

ಮಹಾರಾಷ್ಟ್ರದ ಲಾತೂರ್‌ ಜಿಲ್ಲೆಯ ನಿಲಂಗಾ ತಾಲ್ಲೂಕಿನ ಗ್ರಾಮವೊಂದರಲ್ಲಿ ಕೂಲಿ ಕೆಲಸ ಮಾಡುವ ವ್ಯಕ್ತಿ ತನ್ನ ಹೆಂಡತಿ ಹಾಗೂ ಆಕೆಯ ಪ್ರಿಯಕರನ ವಿರುದ್ಧ ಹುಮನಾಬಾದ್‌ ಪೊಲೀಸರಿಗೆ ದೂರು ನೀಡಿದ್ದಾರೆ.

1998ರಲ್ಲಿ ನಾನು ಮೊದಲು ತಾಬೂಲವಾಡಿಯ ಮಹಿಳೆಯನ್ನು ಮದುವೆಯಾಗಿದ್ದು, ನಾಲ್ವರು ಮಕ್ಕಳು ಇದ್ದಾರೆ. 2010ರಲ್ಲಿ ನನ್ನ ಹೆಂಡತಿ ಅನಾರೋಗ್ಯದಿಂದ ಮೃತಪಟ್ಟ ಕಾರಣ 2011ರಲ್ಲಿ ಎರಡನೆಯ ಮದುವೆಯಾಗಿದ್ದೇನೆ. ಇವಳಿಗೆ 6 ವರ್ಷದ ಮಗಳೂ ಇದ್ದಾಳೆ. ಎರಡು ವರ್ಷಗಳ ಹಿಂದೆ ಹೈದರಾಬಾದ್‌ನಲ್ಲಿ ನಮ್ಮ ಸಂಬಂಧಿಯೊಬ್ಬರ ಮದುವೆ ಇದೆ ಎಂದು ಹೇಳಿ ಹೋದವಳು ಮರಳಿ ಮನೆಗೆ ಬಂದಿಲ್ಲ ಎಂದು ಬಾಲಕಿಯ ತಂದೆ ದೂರಿನಲ್ಲಿ ತಿಳಿಸಿದ್ದಾರೆ.

ಹೆಂಡತಿಯ ಶೋಧ ಕಾರ್ಯ ನಡೆಸಿದಾಗ ಅವಳು ತಾಬೂಲಾ ಗ್ರಾಮದ ಯುವಕನೊಂದಿಗೆ ಹುಮನಾಬಾದ್‌ನಲ್ಲಿ ಬಾಡಿಗೆ ಮನೆ ಮಾಡಿ ವಾಸವಾಗಿರುವುದು ಗೊತ್ತಾಗಿದೆ. ಮನೆಗೆ ಹೋಗಿ ನೋಡಿದಾಗ ಮಗುವಿನ ದೇಹದ ಮೇಲೆ ಸಿಗರೇಟ್‌ನಿಂದ ಸುಟ್ಟಿರುವ ಗಾಯಗಳು ಕಂಡು ಬಂದಿವೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮಗುವನ್ನು ವಿಚಾರಿಸಿದಾಗ ಯುವಕ ತನ್ನ ತೊಡೆಯ ಮೇಲೆ ಕೂರಿಸಿಕೊಂಡು ತೊಡೆಯ ಮೇಲೆ ಕೈಯಾಡಿಸಿ ಸಿಗರೇಟ್‌ನಿಂದ ಸುಟ್ಟಿದ್ದಾನೆ. ಕಟ್ಟಿಗೆಯಿಂದ ಹೊಡೆದಿದ್ದಾನೆ ಎಂದು ತಿಳಿಸಿದ್ದಾಳೆ. ಕೈಗೆ ಬಾವು ಬಂದಿರುವುದನ್ನು ನೋಡಿ ವೈದ್ಯರ ಬಳಿ ತೋರಿಸಿದಾಗ ಕೈ ಮುರಿದಿರುವುದು ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ಬರೆದಿದ್ದಾರೆ.

ಪೊಲೀಸರು ಮಾಹಿತಿ ನೀಡಿದ ನಂತರ ಮಕ್ಕಳ ರಕ್ಷಣಾ ಘಟಕದ ಪದಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬಾಲಕಿಯನ್ನು ಪರಿಶೀಲಿಸಿದರು. ನಂತರ ಬಾಲಕಿಯನ್ನು ಅಜ್ಜನ ವಶಕ್ಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT