ಬಸವಕಲ್ಯಾಣ (ಬೀದರ್ ಜಿಲ್ಲೆ): `ಈಚೆಗೆ ನಗರದಲ್ಲಿ ನಡೆದ ಗೋಹತ್ಯೆ ತಡೆ ಪ್ರಕರಣದಲ್ಲಿ ನಾನು ಕಾನೂನು
ಉಲ್ಲಂಘಿಸಿಲ್ಲ. ಆದರೂ ನನ್ನನ್ನು ಒಳಗೊಂಡು 9 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ'
ಎಂದು ಶಾಸಕ ಶರಣು ಸಲಗರ ಹೇಳಿದ್ದಾರೆ.
ಅವರು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. `ನಗರದ ಹಿರೇಮಠ ಓಣಿಯಲ್ಲಿನ
ಮನೆಯೊಂದರಲ್ಲಿ ಗೋಹತ್ಯೆ ನಡೆಯುತ್ತಿದೆ ಎಂದು ಮೊಬೈಲ್ ಮೂಲಕ ಅಲ್ಲಿನ
ವ್ಯಕ್ತಿಯೊಬ್ಬರು ತಿಳಿಸಿದ್ದರಿಂದ ಸ್ಥಳಕ್ಕೆ ಹೋಗಿದ್ದೇನೆ. ಅಲ್ಲದೆ ತಕ್ಷಣದಲ್ಲಿ
ಪೊಲೀಸ್ ಇಲಾಖೆಯವರಿಗೆ ಹಾಗೂ ಪಶು ಸಂಗೋಪನಾ ಇಲಾಖೆಯವರಿಗೆ ಈ ಮಾಹಿತಿಯನ್ನು
ನೀಡಿದ್ದೇನೆ' ಎಂದರು.
`ಅಕ್ರಮವಾಗಿ ನಾನು ಯಾರ ಮನೆಗೂ ನುಗ್ಗಿಲ್ಲ. ಯಾರ ಅವಹೇಳನವೂ ಮಾಡಿಲ್ಲ. ಆದರೂ,
ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ವಿಜಯಸಿಂಗ್ ಅವರು ಗೃಹ ಸಚಿವರನ್ನು ಭೇಟಿಯಾಗಿ ನನ್ನ
ಮೇಲೆ ಪ್ರಕರಣ ದಾಖಲಿಸಿದ್ದಾರೆ. ಗೋಹತ್ಯೆ ತಡೆ ಕಾಯ್ದೆಯು ಚಾಲ್ತಿಯಲ್ಲಿದ್ದು ಆಕಳು,
ಕರು, ಎತ್ತು ಮುಂತಾದವುಗಳ ಹತ್ಯೆಯನ್ನು ನಿಷೇಧಿಸುತ್ತದೆ. ಹತ್ಯೆ ನಡೆಸುವವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ.
ಆದ್ದರಿಂದ ನಾನು ಹತ್ಯೆ ತಡೆಗೆ ಯತ್ನಿಸಿದ್ದೇನೆ. ಮುಂದೆಯೂ ಗೋಹತ್ಯೆ ತಡೆಗೆ ಅಭಿಯಾನ
ನಡೆಸುತ್ತೇನೆ. ಯಾರ ಹೆದರಿಕೆಗೂ ಬಗ್ಗುವುದಿಲ್ಲ. ನನ್ನ ಈ ಕಾರ್ಯಕ್ಕೆ ಬೆಂಬಲಿಸುವವರ
ದೊಡ್ಡ ಪಡೆಯೇ ಇದೆ' ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.