ಬೀದರ್: ಪ್ರತಿ ಪಕ್ಷದವರು ಮಂಗಳವಾರ (ಡಿ.8) ಭಾರತ ಬಂದ್ ನಡೆಸಲು ಹೊರಟಿರುವುದು ನಾಚಿಕೆಗೇಡು ಸಂಗತಿಯಾಗಿದೆ ಎಂದು ಸಂಸದ ಭಗವಂತ ಖೂಬಾ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಅಭಿವೃದ್ಧಿಗೆ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ಅಧಿವೇಶನದಲ್ಲಿ ರೈತರಿಗೆ ಸಂಬಂಧಿಸಿದ ಮಸೂದೆಗಳು ಜಾರಿಗೆ ಬಂದ ಮೇಲೆ ಕಾಂಗ್ರೆಸ್ನವರು ಮುಗ್ಧ ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
60 ವರ್ಷಗಳ ಕಾಲ ದೇಶವನ್ನಾಳಿದರೂ ರೈತರು, ಬಡವರು, ದೀನ ದಲಿತರನ್ನು ಅಭಿವೃದ್ಧಿಗೊಳಿಸದೆ ಕತ್ತಲಲ್ಲಿ ಇಟ್ಟಿದ್ದಾರೆ. ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಮಸೂದೆಯಲ್ಲಿ ಯಾವುದೇ ಮೋಸ ಇಲ್ಲ. ರೈತರಿಗೆ ಅನ್ಯಾಯ ಆಗುವುದಿಲ್ಲ. ರೈತರು ಭಾರತ ಬಂದ್ನಲ್ಲಿ ಪಾಲ್ಗೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.