ಹುಮನಾಬಾದ್: ‘ಪಟ್ಟಣದಲ್ಲಿ ವಿಶ್ವ ಗುರು ಬಸವಣ್ಣನವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ತಾಲ್ಲೂಕು ಆಡಳಿತ ಅಗತ್ಯ ಸಿದ್ದತೆಗಳನ್ನು ಮಾಡಬೇಕು’ ಎಂದು ಶಾಸಕ ರಾಜಶೇಖರ ಪಾಟೀಲ ತಿಳಿಸಿದರು.
ಪಟ್ಟಣದ ತಹಶೀಲ್ ಕಚೇರಿ ಸಭಾಂಗಣದಲ್ಲಿ ಬಸವ ಜಯಂತಿ ಅಂಗವಾಗಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,‘12ನೇ ಶತಮಾನದಲ್ಲಿ ಜಾತಿ ಪದ್ಧತಿ, ಮೂಢ ನಂಬಿಕೆ, ಅಂತರ್ಜಾತಿ ವಿವಾಹ ಹಾಗೂ ಅನುಭವ ಮಂಟಪ ನಿರ್ಮಿಸಿ, ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ’ ಎಂದು ಹೇಳಿದರು.
ಕೋವಿಡ್ ಕಾರಣ ಮೂರು ವರ್ಷಗಳಿಂದ ಬಸವ ಜಯಂತಿ ಆಚರಣೆ ಮಾಡಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಈ ಸಾರಿ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಅವರು ಹೇಳಿದರು.
ಜಯಂತಿಗಾಗಿ ಚಂದಾ ವಸೂಲಿ ಮಾಡಬಾರದು. ಜಯಂತಿ ದಿನ ಅನ್ನ ದಾಸೋಹ, ಬಾಜಾ–ಭಜಂತ್ರಿ ಹಾಗೂ ಡಿ.ಜೆ ವ್ಯವಸ್ಥೆಯನ್ನು ನಾನು ಮಾಡುತ್ತೇನೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ, ತಹಶೀಲ್ದಾರ್ ಡಾ. ಪ್ರದೀಪಕುಮಾರ ಹಿರೇಮಠ, ಪ್ರಮುಖರಾದ ಮಲ್ಲಿಕಾರ್ಜುನ ಮಾಶೆಟ್ಟಿ, ಸಚಿನ್ ಮಠಪತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಫ್ಸರ್ ಮಿಯ್ಯಾ, ಡಾ. ಸೋಮಯ್ಯ, ರಮೇಶ ಮಾಡಗಿ, ವೀರೇಶ ಸಿಗಿ ಹಾಗೂ ವಿಜಯಕುಮಾರ ದುರ್ಗಾದ ಇದ್ದರು.