ಬಸವಕಲ್ಯಾಣ: ಬಸವ ಜಯಂತಿ ಅಂಗವಾಗಿ ಮೂರು ದಿನಗಳವರೆಗೆ ನಡೆಯುವ ನಗರದ ಬಸವೇಶ್ವರ ದೇವಸ್ಥಾನದ ಜಾತ್ರೆ ನಿಮಿತ್ತ ಶುಕ್ರವಾರ ಬೆಳ್ಳಿ ತೊಟ್ಟಿಲಿನ ಭವ್ಯ ಮೆರವಣಿಗೆ ನಡೆಸಿ ನಂತರ ತೊಟ್ಟಿಲಿನಲ್ಲಿ ಬಸವಣ್ಣನವರ ಪ್ರತಿಮೆ ಇಟ್ಟು ಜೋಗುಳ ಹಾಡಿ ತೊಟ್ಟಿಲು ಕಾರ್ಯಕ್ರಮ ನೆರವೇರಿಸಲಾಯಿತು.
ಮೆರವಣಿಗೆಗೆ ಮುಚಳಂಬ ಪ್ರಣವಾನಂದ ಸ್ವಾಮೀಜಿ ಚಾಲನೆ ನೀಡಿದರು. ಗೋರಟಾ ಪ್ರಭುದೇವರು ಷಟಸ್ಥಲ ಧ್ವಜಾರೋಹಣ ನೆರವೆರಿಸಿದರು. ಶರಣ ಹರಳಯ್ಯ ವೃತ್ತದವರೆಗೆ ಮೆರವಣಿಗೆ ನಡೆಯಿತು. ಪುಷ್ಪಗಳಿಂದ ಅಲಂಕರಿಸಿದ ರಥದಲ್ಲಿ ಬೆಳ್ಳಿ ತೊಟ್ಟಿಲು ಇಡಲಾಗಿತ್ತು. ಮೆರವಣಿಗೆ ಮನೆ ಎದುರಿಗೆ ಬಂದಾಗ ಅನೇಕರು ಕುಟುಂಬ ಸಮೇತರಾಗಿ ಅದಕ್ಕೆ ಪೂಜೆ ಸಲ್ಲಿಸಿ ತೆಂಗು, ಕರ್ಪೂರ ಅರ್ಪಿಸಿದರು.
ಇನ್ನೊಂದು ರಥದಲ್ಲಿ ವಚನ ಗ್ರಂಥ ಇಡಲಾಗಿತ್ತು. ಕುದುರೆಯ ಮೇಲೆ ಕುಳಿತಿದ್ದ ಬಸವಣ್ಣ ಮತ್ತು ಅಕ್ಕ ಮಹಾದೇವಿಯವರ ವೇಷಧಾರಿಗಳು ಗಮನ ಸೆಳೆದರು. ಅವರಿಗೆ ಛತ್ರಿ ಹಿಡಿದು ಚಾಮರ ಬೀಸಲಾಯಿತು. ಎರಡು ಪ್ರತ್ಯೇಕ ತೆರೆದ ವಾಹನಗಳಲ್ಲಿ ವಚನಪಿತಾಮಹ ಫ.ಗು.ಹಳಕಟ್ಟಿ ಮತ್ತು ಜಾತ್ರಾ ಮಹೋತ್ಸವ ಆರಂಭಿಸಿದ ಬಾಬಾಸಾಹೇಬ್ ವಾರದ್ ಅವರ ದೊಡ್ಡ ಭಾವಚಿತ್ರಗಳನ್ನೂ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.
ಡೊಳ್ಳು ಕುಣಿತ, ಲಂಬಾಣಿ ನೃತ್ಯದ ತಂಡ, ಭಜನೆ, ಕೋಲಾಟ, ಬ್ಯಾಂಡಬಾಜಾ ತಂಡಗಳು ಪಾಲ್ಗೊಂಡಿದ್ದವು. ಮೆರವಣಿಗೆಯಲ್ಲಿದ್ದ ಹೆಚ್ಚಿನವರು ಬಿಳಿ ಬಟ್ಟೆ ಮತ್ತು ಟೊಪ್ಪಿಗೆ ಧರಿಸಿ ಕೊರಳಲ್ಲಿ ಭಗವಾ ಟಾವೆಲ್ ಗಳನ್ನು ಹಾಕಿಕೊಂಡಿದ್ದರು. ಷಟಸ್ಥಲ್ ಧ್ವಜಗಳನ್ನು ಹಿಡಿಯಲಾಗಿತ್ತು. ವಚನ ಸಂಗೀತ ಮತ್ತು ಧ್ವನಿವರ್ಧಕದ ಝೇಂಕಾರಕ್ಕೆ ಅನೇಕರು ಸಂತಸದಿಂದ ಕುಣಿದರು. ಜೈ ಗುರು ಬಸವ, ಬಸವೇಶ್ವರ ಮಹಾರಾಜ ಕೀ ಜೈ ಎಂದು ಜೈಕಾರ ಕೂಗಲಾಯಿತು.
ಶಾಸಕ ಶರಣು ಸಲಗರ, ವಿಧಾನಪರಿಷತ್ ಮಾಜಿ ಸದಸ್ಯ ವಿಜಯಸಿಂಗ್, ಹುಲಸೂರ ಶಿವಾನಂದ ಸ್ವಾಮೀಜಿ, ಸಾಯಗಾಂವ ಶಿವಾನಂದ ದೇವರು, ದೇವಸ್ಥಾನ ಸಮಿತಿ ಅಧ್ಯಕ್ಷ ಬಸವರಾಜ ಕೋರಕೆ, ವಿಶ್ವಸ್ಥ ಸಮಿತಿ ಅಧ್ಯಕ್ಷ ಶಶಿಕಾಂತ ದುರ್ಗೆ, ಮುಖಂಡರಾದ ಪ್ರದೀಪ ವಾತಡೆ, ಸುನಿಲ ಪಾಟೀಲ, ರವಿ ಚಂದನಕೆರೆ, ಅರ್ಜುನ ಕನಕ, ಮನೋಹರ ಮೈಸೆ, ಗಿರೀಶ ತಾಂಬೋಳೆ, ಶಿವಕುಮಾರ ಶೆಟಗಾರ, ಗುರುನಾಥ ದುರ್ಗೆ, ಮಲ್ಲಿಕಾರ್ಜುನ ಚಿರಡೆ, ರಾಜಕುಮಾರ ಹೊಳಕುಂದೆ, ಶ್ರೀಕಾಂತ ಬಡದಾಳೆ, ವಿವೇಕಾನಂದ ಹೊದಲೂರೆ, ಡಾ.ಜಿ.ಎಸ್.ಭುರಳೆ, ಕಾಶಪ್ಪ ಸಕ್ಕರಬಾವಿ, ಅಶೋಕ ನಾಗರಾಳೆ, ಶಿವಕುಮಾರ ಬಿರಾದಾರ, ಗದಗೆಪ್ಪ ಹಲಶೆಟ್ಟೆ, ರವಿ ಕೊಳಕೂರ, ಪ್ರಕಾಶ ಮೆಂಡೋಳೆ ಮತ್ತಿತರರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.