ಬಸವಕಲ್ಯಾಣ: ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಶುಕ್ರವಾರ ರೈತರ ಮುಂಗಾರಿನ ಹಬ್ಬವಾದ ಕಾರ ಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸಿ ಜಾನುವಾರುಗಳ ಪೂಜೆ ಸಲ್ಲಿಸಲಾಯಿತು.
ಎತ್ತುಗಳ ಮೈ ತೊಳೆದು ಅವುಗಳ ಕೋಡುಗಳಿಗೆ ಬಣ್ಣ ಹಚ್ಚಿ, ಮತಾಟಿ, ಮಗಡಾ, ಕೋಡುಬಳೆ, ಕೊರಳಪಟ್ಟಿ, ಗಂಟೆಸರ ಕಟ್ಟಿ ಮೈಮೇಲೆ ಝೂಲಾ ಹಾಕಿ ನಂತರ ರೈತರು ಕುಟುಂಬ ಸಮೇತರಾಗಿ ಅವುಗಳಿಗೆ ಪೂಜೆ ಸಲ್ಲಿಸಿ, ನೈವೇದ್ಯ ತಿನ್ನಿಸಿದರು.
ಮನೆಯಲ್ಲಿ ಸಿಹಿ ಖಾದ್ಯಗಳ ಊಟ ಸವಿದರು. ಸಂಜೆ ಊರ ಅಗಸೆಗಳಲ್ಲಿ ಎಲ್ಲರ ಎತ್ತುಗಳನ್ನು ತಂದು ನಿಲ್ಲಿಸಿ ಓಡಿಸುವ ಸ್ಪರ್ಧೆಯೂ ನಡೆಯಿತು.
`ಕೊರೊನಾ ಲಾಕ್ಡೌನ್ ಮಧ್ಯೆ ರೈತರು ಹೊಲದ ಎಲ್ಲ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿದ್ದಾರೆ. ಎರಡು ದಿನಗಳ ಹಿಂದೆ ಮಳೆಯೂ ಸರಿಯಾಗಿ ಬಿದ್ದಿದೆ. ಆದ್ದರಿಂದ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದು, ಕೆಲ ದಿನಗಳ ನಂತರ ರೈತರು ಬಿತ್ತನೆ ಆರಂಭಿಸುವ ಧಾವಂತದಲ್ಲಿದ್ದಾರೆ' ಎಂದು ಮಲ್ಲಿಕಾರ್ಜುನವಾಡಿಯ ಪ್ರವೀಣಕುಮಾರ ಪುಣೆ ಅವರು ತಿಳಿಸಿದ್ದಾರೆ.