ಭಾಲ್ಕಿ: ‘ಬಸವ ಕಾಯಕ, ದಾಸೋಹ ಫೌಂಡೇಷನ್ ಪ್ರಸಕ್ತ ಸಾಲಿನ ನೀಟ್ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆಗೈದ ತಾಲ್ಲೂಕಿನ ಧನ್ನೂರ (ಎಚ್) ಗ್ರಾಮದ ಐವರು ವಿದ್ಯಾರ್ಥಿನಿಯರಿಗೆ ಒಟ್ಟು ₹35 ಸಾವಿರ ಚೆಕ್ನೊಂದಿಗೆ ಪ್ರತಿಭಾ ಪುರಸ್ಕಾರ ನೀಡಿ, ಪ್ರೋತ್ಸಾಹಿಸಿದೆ.
ಉದ್ಯಮಿ ಕಾಶಪ್ಪ ಧನ್ನೂರ ಅವರ ದ್ವಿತೀಯ ಲಿಂಗೈಕ್ಯ ಸಂಸ್ಮರಣೆ ಪ್ರಯುಕ್ತ ಧನ್ನೂರ (ಎಚ್) ಗ್ರಾಮದಲ್ಲಿ ಆಯೋಜಿಸಿದ್ದ ಬಸವ ಜ್ಯೋತಿ ಕಾರ್ಯಕ್ರಮದಲ್ಲಿ ಫೌಂಡೇಷನ್ ಅಧ್ಯಕ್ಷ ಬಸವರಾಜ ಧನ್ನೂರ ಅವರು, ನೀಟ್ನಲ್ಲಿ ಸಾಧನೆಗೈದು ಸರ್ಕಾರಿ ಕೋಟಾದಡಿ ವೈದ್ಯಕೀಯ ಸೀಟ್ಗೆ ಅರ್ಹತೆ ಗಳಿಸಿದ ರಕ್ಷಿತಾ ನಾಗನಾಥ ಅರಳೆ, ಮೀನಾಕ್ಷಿ ನಾಗೂರೆ ಅವರಿಗೆ ತಲಾ ₹10 ಸಾವಿರ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ಸೌಮ್ಯ, ಐಶ್ವರ್ಯ ಹಾಗೂ ಭಾಗ್ಯಶ್ರೀ ಅವರಿಗೆ ತಲಾ ₹5 ಸಾವಿರದ ಚೆಕ್ ಹಾಗೂ ಪ್ರಮಾಣ ಪತ್ರ ಪ್ರದಾನ ಮಾಡಿದರು.
ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿ,‘ಕಾಶಪ್ಪ ಧನ್ನೂರ ಅವರು ಬಸವಣ್ಣನವರ ತತ್ವ ಮೈಗೂಡಿಸಿಕೊಂಡಿದ್ದರು. ಕಾಯಕ, ದಾಸೋಹಕ್ಕೆ ಹೆಸರಾಗಿದ್ದರು’ಎಂದರು.
ತಂದೆ ಕಾಶಪ್ಪ ಧನ್ನೂರ ಅವರ ಸ್ಮರಣಾರ್ಥ ಪ್ರತಿ ವರ್ಷ ಕಾರ್ಯಕ್ರಮ ಆಯೋಜಿಸಿ, ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಗುತ್ತಿದೆ ಎಂದು ಬಸವ ಕಾಯಕ, ದಾಸೋಹ ಫೌಂಡೇಷನ್ ಅಧ್ಯಕ್ಷ ಬಸವರಾಜ ಧನ್ನೂರ ಹೇಳಿದರು.
ಹುಲಸೂರಿನ ಶಿವಾನಂದ ಸ್ವಾಮೀಜಿ, ಬಸವ ಸೇವಾ ಪ್ರತಿಷ್ಠಾನದ ಡಾ. ಗಂಗಾಂಬಿಕೆ ಅಕ್ಕ ಮಾತನಾಡಿದರು.
ಸಾಹಿತಿ ಸೋಮನಾಥ ಯಾಳವಾರ ಉಪನ್ಯಾಸ ನೀಡಿದರು.
ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ರಾಘವೇಂದ್ರ ಪಾಟೀಲ ಹಾಗೂ ಧನರಾಜ ಪುಟೇದ್ ಮತ್ತು ಬಸವೇಶ್ವರ ದೇವಸ್ಥಾನ ಟ್ರಸ್ಟ್ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಹಿರಿಯರಾದ ಬಿ.ಎಸ್. ಕುದರೆ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ ಗಂದಗೆ, ತೆಲಂಗಾಣ ರಾಜ್ಯ ಘಟಕದ ಅಧ್ಯಕ್ಷ ಶಂಕರೆಪ್ಪ ಪಾಟೀಲ ಜಹೀರಾಬಾದ್, ಬೀದರ್ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಜಿಲ್ಲಾ ಲಿಂಗಾಯತ ಸಮಾಜದ ಅಧ್ಯಕ್ಷ ಕುಶಾಲರಾವ್ ಪಾಟೀಲ ಖಾಜಾಪುರ, ಉದ್ಯಮಿ ಜೈರಾಜ್ ಖಂಡ್ರೆ, ಗ್ರಾಮದ ಪ್ರಮುಖರಾದ ಗುಂಡೇರಾವ್ ಪಾಟೀಲ, ಶ್ರೀಕಾಂತ ದಾನಿ, ಬಾಬುರಾವ್ ಪೊಲೀಸ್ ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪರಮೇಶ್ವರ ಪಾಟೀಲ, ಸುಶೀಲಾಬಾಯಿ ಧನ್ನೂರ, ಕಂಟೆಪ್ಪ ದಾನಪ್ಪ, ಬಸವ ಕಾಯಕ ಹಾಗೂ ದಾಸೋಹ ಫೌಂಡೇಷನ್ ಕಾರ್ಯದರ್ಶಿ ಸುವರ್ಣ ಧನ್ನೂರ ಇದ್ದರು.
ಸುರೇಶ ಸ್ವಾಮಿ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.