ಭಾಲ್ಕಿ: ತಾಲ್ಲೂಕಿನ ಕಲವಾಡಿ ಗ್ರಾಮದಲ್ಲಿ ಶನಿವಾರ ನಡೆಯಬೇಕಿದ್ದ ಬಾಲ್ಯ ವಿವಾಹವನ್ನು ಅಧಿಕಾರಿಗಳು ಪಾಲಕರ ಮನವೊಲಿಸಿ ತಡೆಯುವಲ್ಲಿ ಯಶಸ್ವಿಯಾದರು. ಕಲವಾಡಿ ಗ್ರಾಮದ ಬಾಲಕಿಯ ವಿವಾಹ ಬಸವಕಲ್ಯಾಣ ತಾಲ್ಲೂಕಿನ ಹುಲಗುತ್ತಿ ಗ್ರಾಮದ ಯುವಕನ ಜೊತೆ ನಡೆಯುವುದಿತ್ತು.
‘ಬಾಲ್ಯ ವಿವಾಹ ನೆರವೇರಿಸುವುದು ಕಾನೂನಾತ್ಮಕ ಅಪರಾಧ’ ಎಂದು ಬಾಲಕಿ ಮತ್ತು ಯುವಕನ ಪೋಷಕರಿಗೆ ಅಧಿಕಾರಿಗಳು ತಿಳಿ ಹೇಳಿದರು. ‘ಬಾಲ್ಯವಿವಾಹ ಮಾಡುವುದಿಲ್ಲ’ ಎಂಬ ಮುಚ್ಚಳಿಕೆ ಪತ್ರವನ್ನು ಪಡೆದುಕೊಂಡರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶರಣಬಸಪ್ಪ ಬೆಳಗುಪ್ಪಿ, ಪೊಲೀಸ್ ಪೇದೆಗಳಾದ ಲತಾ, ನಾಗಪ್ಪಾ, ಮಕ್ಕಳ ಸಹಾಯವಾಣಿ ಕೇಂದ್ರದ ಸಂದೀಪ ದೇವಕೆ ಇದ್ದರು.