ಜನವಾಡ: ಕುಡಿಯುವ ನೀರಿನ ಬವಣೆ ತಪ್ಪಿಸಲು ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸಲು ಮಳೆ ನೀರು ವ್ಯರ್ಥವಾಗಿ ಹೋಗದಂತೆ ಸಂಗ್ರಹಿಸಬೇಕು ಎಂದು ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಮಯೂರಕುಮಾರ ಗೊರಮೆ ಹೇಳಿದರು.
ಬೀದರ್ ತಾಲ್ಲೂಕಿನ ಹಮಿಲಾಪೂರ ಗ್ರಾಮದ ವಿ.ಎಂ. ರಾಂಪೂರೆ ಪಬ್ಲಿಕ್ ಸ್ಕೂಲ್ನಲ್ಲಿ ‘ಕ್ಯಾಚ್ ದಿ ರೇನ್ ವೇರ್ ಇಟ್ ವಾಲ್ಸ್, ವೆನ್ ಇಟ್ ಫಾಲ್ಸ್’ ಶೀರ್ಷಿಕೆಯಡಿ ಆಯೋಜಿಸಿದ್ದ ಜಲ ಜಾಗೃತಿ ಕಾರ್ಯಕ್ರಮವನ್ನು ಸಸಿಗೆ ನೀರೆರೆದು ಉದ್ಘಾಟಿಸಿ ಅವರು ಮಾತನಾಡಿದರು.
ನೀರನ್ನು ಹಿತ ಮಿತವಾಗಿ ಬಳಸುವ ಕುರಿತು ವ್ಯಾಪಕ ಜಾಗೃತಿ ನಡೆಯಬೇಕು. ಮರ ಗಿಡಗಳಿದ್ದರೆ ಮಾತ್ರ ಮಳೆ ಚೆನ್ನಾಗಿ ಬರುತ್ತದೆ. ಹೀಗಾಗಿ ಸಸಿಗಳನ್ನು ಹೆಚ್ಚಾಗಿ ನೆಡಬೇಕು ಎಂದು ಸಲಹೆ ಮಾಡಿದರು.
ಮಳೆಯ ಪ್ರಮಾಣ ದಿನೇ ದಿನೇ ಕಡಿಮೆಯಾಗುತ್ತಿದೆ. ಕಾರಣ, ಬಿದ್ದ ಮಳೆ ನೀರನ್ನೇ ಸಂಗ್ರಹಿಸಿ, ಭೂಮಿಯಲ್ಲಿ ಇಂಗಿಸಿ ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದು ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯ ಶಿವಯ್ಯ ಸ್ವಾಮಿ ಹೇಳಿದರು.
ಬರಮುಕ್ತಿಗಾಗಿ ಮಳೆ ನೀರಿನ ಸಂರಕ್ಷಣೆ ಅಗತ್ಯವಾಗಿದೆ. ಮುಂದಿನ ಪೀಳಿಗೆಗೂ ಜೀವಜಲ ಉಳಿಸಿಕೊಳ್ಳುವ ಕೆಲಸ ಆಗಬೇಕಾಗಿದೆ ಎಂದರು.
ರಾಂಪೂರೆ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಅಧ್ಯಕ್ಷ ಮಹೇಶ ಎಸ್. ರಾಂಪೂರೆ, ಓಂಪ್ರಕಾಶ ರೊಟ್ಟೆ, ಗಾದಗಿ ಪಂಚಾಯಿತಿ ಉಪಾಧ್ಯಕ್ಷ ಎಂ.ಡಿ. ಸಿರಾಜೊದ್ದಿನ್, ಅಭಿವೃದ್ಧಿ ಅಧಿಕಾರಿ ಶ್ರೀಧರ ಗೌಡ, ಪ್ರಮುಖರಾದ ಓಂಪ್ರಕಾಶ ಉಪ್ಪೆ, ಸಿದ್ರಾಮ ಘಂಟೆ, ಕಾಶೀನಾಥ ಕೋಳಿ, ಸಯ್ಯದ್ ಮಿನಾಜ್ ಉಪಸ್ಥಿತರಿದ್ದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನೆಹರೂ ಯುವ ಕೇಂದ್ರ, ಗಾದಗಿ ಗ್ರಾಮ ಪಂಚಾಯಿತಿ, ಬುದ್ಧಿಸ್ಟ್ ಎಜುಕೇಶನ್ ಆ್ಯಂಡ್ ಚಾರಿಟಬಲ್ ಟ್ರಸ್ಟ್, ವಿ.ಎಂ. ರಾಂಪೂರೆ ಪಬ್ಲಿಕ್ ಸ್ಕೂಲ್ ಹಾಗೂ ದ ಬುದ್ಧ ಯುತ್ ಕ್ಲಬ್ ಆಶ್ರಯದಲ್ಲಿ ಕಾರ್ಯಕ್ರಮ ಸಂಘಟಿಸಲಾಗಿತ್ತು.