ಚಿಟಗುಪ್ಪ: ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಬೆಂಗಳೂರಿಗೆ ಗುಳೆ ಹೋಗಿದ್ದವರು ಭಾನುವಾರ ಸ್ವ ಜಿಲ್ಲೆಗೆ ಮರಳಿದರು.
ತಾಲ್ಲೂಕಿನ ಹಳ್ಳಿಖೇಡ(ಕೆ) ಗ್ರಾಮದ ಮೇಲೆ ಹುಮನಾಬಾದ್, ಚಿಟಗುಪ್ಪ ತಾಲ್ಲೂಕಿನ ಬಸ್ಗಳಲ್ಲಿ ಆಗಮಿಸಿದವರನ್ನು ಜನ ಸ್ವಾಗತಿಸಿದರು.
ಆರೋಗ್ಯ ಇಲಾಖೆ ಸಿಬ್ಬಂದಿ ಎಲ್ಲ ನಾಗರಿಕರ ದಾಖಲೆ ಸಂಗ್ರಹಿಸಿ, ಆರೋಗ್ಯ ಪರೀಕ್ಷೆ ನಡೆಸಿದರು.
ಲಾಕ್ಡೌನ್ ಮೂರನೇ ಹಂತ ತಲುಪಿದೆ. ಸ್ವಗ್ರಾಮಕ್ಕೆ ಮರಳುವ ಧಾವಂತದಲ್ಲಿರುವ ಕಾರ್ಮಿಕರಿಗೆ ವೈದ್ಯಕೀಯ ಪರೀಕ್ಷೆ ನಡೆಸಿ ತಾಲ್ಲೂಕು ಆಡಳಿತ ಎಲ್ಲರ ಬಲಗೈ ಮೇಲೆ 14 ದಿನದ ಕ್ವಾರಂಟೈನ್ ಮುದ್ರೆ ಹಾಕಿ ಅವರ ಸ್ವ ಗ್ರಾಮಗಳಿಗೆ ಕಳಿಸುವ ವ್ಯವಸ್ಥೆ ಮಾಡಿತು.
ಭಾನುವಾರ ಸಂಜೆ 5 ಗಂಟೆಯವರೆಗೂ ಒಟ್ಟು 9 ಬಸ್ಗಳಲ್ಲಿ 280 ಜನ ಬಂದಿದ್ದಾರೆ.
ತಹಶೀಲ್ದಾರ್ ನಾಗಯ್ಯ ಸ್ವಾಮಿ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸುರೇಶ ಭಾವಿಮನಿ ಹಾಗೂ ವೈಧ್ಯಾಧಿಕಾರಿ ಡಾ.ವೀರನಾಥ ಕನಕ ಇದ್ದರು.