ಬಿಹಾರ ರಾಜ್ಯದ ಕಟಿಯಾರ್, ಪೂರ್ಣಿಯಾ ಜಿಲ್ಲೆಯ ವಿವಿಧ ತಾಲ್ಲೂಕುಗಳಿಗೆ ಸೇರಿದವರಾದ ನಾವು ಹೆಂಡತಿ, ಮಕ್ಕಳು, ಕುಟುಂಬಸ್ಥರನ್ನು ಬಿಟ್ಟು ಬಂದು ಸುಮಾರು ಆರು ತಿಂಗಳಾಯಿತು. ಇನ್ನೇನು ಸ್ವಗ್ರಾಮಗಳಿಗೆ ತೆರಳಿ ಮನೆಯ ಸದಸ್ಯರ ಜೊತೆ ಕೆಲ ಕಾಲ ಆರಾಮವಾಗಿ ಕಾಲ ಕಳೆಯಬೇಕು ಎನ್ನುವಷ್ಟರಲ್ಲಿಯೇ ಕೊರೊನಾ ವೈರಾಣುವನ್ನು ತಡೆಯಲು ಸರ್ಕಾರ ಲಾಕ್ಡೌನ್ ಘೋಷಿಸಿದ್ದರಿಂದ ಅನಿವಾರ್ಯವಾಗಿ ಇಲ್ಲಿಯೇ ಉಳಿದುಕೊಂಡೆವು. ಇಲ್ಲಿ ಊಟಕ್ಕೆ, ವಾಸಕ್ಕೆ ನಮಗೆ ಯಾವುದೇ ತೊಂದರೆ ಇಲ್ಲ. ಈಗ ಇತರ ರಾಜ್ಯಗಳಿಗೆ ಹೋಗಲು ಸೇವಾಸಿಂಧು ಅಪ್ಲಿಕೇಶನ್ನಲ್ಲಿ ಹೆಸರು ನೋಂದಾಯಿಸಲು ಸೂಚಿಸಿದ್ದಾರೆ. ಆದರೆ, ಈ ಅಪ್ಲಿಕೇಶನ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಕಾರ್ಮಿಕರಾದ ಚಂದನಕುಮಾರ, ಪಿಂಕು ಕುಮಾರ ಅಳಲು ತೋಡಿಕೊಳ್ಳುತ್ತಾರೆ.