ಚಿಟಗುಪ್ಪ: ತಾಲ್ಲೂಕಿನ ನಿರ್ಣಾ ಗ್ರಾಮದ ಪಾಂಡುರಂಗ ಮಂದಿರ ಓಣಿ ಮಹಿಳೆಯೊಬ್ಬರಿಗೆ ಕೋವಿಡ್–19 ಸೋಂಕು ದೃಢಪಟ್ಟಿದೆ. ಅವರ ಮನೆ ಸುತ್ತ 100 ಮೀಟರ್ ನಾಕಾಬಂದಿ ಹಾಕಲಾಗಿದೆ.
ತಹಶೀಲ್ದಾರ್ ಜಿಯಾವುಲ್ಲಾ ಭಾನುವಾರ ರಾತ್ರಿ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಬಳಿಕ ಅಧಿಕಾರಿಗಳ ಜತೆ ಚರ್ಚಿಸಿದರು.
‘ಸೋಂಕಿತರ ಮನೆ ಸುತ್ತಲಿನ ಪ್ರದೇಶದ ನಾಲ್ಕು ರಸ್ತೆಗಳಿಗೆ ಬ್ಯಾರಿಕೇಡ್ ಅಳವಡಿಸಿ, ಕಟ್ಟಿಗೆಗಳಿಂದ ಕಟ್ಟಿ 100 ಮೀಟರ್ ನಿರ್ಬಂಧ ವಿಧಿಸಲಾಗಿದೆ. ಆ ಪ್ರದೇಶದ ಒಳಗಡೆ ಬರುವ ಮನೆಗಳ ನಾಗರಿಕರು ಅನಗತ್ಯವಾಗಿ ಹೊರಗಡೆ ಬರುವುದನ್ನು ನಿಷೇಧಿಸಬೇಕು’ ಎಂದು ತಿಳಿಸಿದರು.
ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಹೋಮ್ ಕ್ವಾರಂಟೈನ್ಗೆ ಒಳಪಡಿಸಲಾಗುವುದು ಎಂದರು.
‘ನಾಗರಿಕರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ತಿಳಿಸಬೇಕು. ಅಂತರ ಕಾಯ್ದುಕೊಂಡು ವ್ಯಾಪಾರ ಮಾಡುವಂತೆ ನೋಡಿಕೊಳ್ಳಬೇಕು’ ಎಂದು ಆರೋಗ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿದರು.
ವೈದ್ಯಾಧಿಕಾರಿ ಡಾ.ವೀರನಾಥ ಕನಕ್, ವೈದ್ಯ ಡಾ.ಚಂದ್ರಕಾಂತ್, ಪಿಎಸ್ಐ ಸುನೀತಾ, ಕಂದಾಯ ನಿರೀಕ್ಷಕ ಪ್ರಶಾಂತ್ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.