ಬೀದರ್: ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮೇಲ್ಮನವಿ ನ್ಯಾಯಾಲಯದ (ಕೆಎಟಿ) ಆದೇಶವನ್ನು ತಿರುಚಿರುವ ಹುಮನಾಬಾದ್ ಹೊರವಲಯದ ಕಲ್ಲೂರು ರಸ್ತೆಯಲ್ಲಿರುವ ಬಸವತೀರ್ಥ ಮಠದ ಸಿದ್ದಲಿಂಗ ಸ್ವಾಮೀಜಿ ವಿರುದ್ಧ ಸಂಬಂಧಿಸಿದ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಹುಮನಾಬಾದ್ ತಹಶೀಲ್ದಾರ್ ಅವರಿಗೆ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಮಂಗಳವಾರ ಆದೇಶ ನೀಡಿದ್ದಾರೆ.
ಹುಮನಾಬಾದ್ ತಾಲ್ಲೂಕಿನ ಬೋರಂಪಳ್ಳಿ ಸರ್ವೇ ನಂಬರ್ 38, 274, 277, 282, ಗಡವಂತಿ ಗ್ರಾಮದ ಸರ್ವೇ ನಂಬರ್ 156ಕ್ಕೆ ಸಂಬಂಧಿಸಿದಂತೆ ಸ್ವಾಮೀಜಿ ದಾಖಲೆಗಳನ್ನು ತಿರುಚಿರುವುದು ದೃಢಪಟ್ಟಿದೆ ಎಂದು ಬೆಂಗಳೂರಿನ ಮೇಲ್ಮನವಿ ನ್ಯಾಯಾಲಯವು 2021ರ ಡಿಸೆಂಬರ್ 28ರಂದು ಆದೇಶ ಹೊರಡಿಸಿತ್ತು. ಬಸವತೀರ್ಥ ಮಠಕ್ಕೂ ಈ ಆಸ್ತಿಗೂ ಯಾವುದೇ ಸಂಬಂಧವಿಲ್ಲ ಎಂದು ಆದೇಶಿಸಿತ್ತು.
ಸ್ವಾಮೀಜಿ ಅವರು ಕೆಎಟಿ ಆದೇಶದ ಖಂಡಿಕೆಯಲ್ಲಿ ಇಲ್ಲದ ವಿಷಯವನ್ನು ಸೇರಿಸಿ ತಿರುಚಿದ್ದಾರೆ ಎಂದು 2023ರ ಏಪ್ರಿಲ್ 20ರಂದು ಬೋರಂಪಳ್ಳಿಯ ಚಂದ್ರಕಾಂತ ಶಾಮರಾವ ಬಿರಾದಾರ ಅವರು ಜಿಲ್ಲಾಧಿಕಾರಿಗೆ ಲಿಖಿತ ದೂರು ಸಲ್ಲಿಸಿದ್ದರು. ಇದನ್ನು ಆಧರಿಸಿ ಜಿಲ್ಲಾಧಿಕಾರಿ ವಿಚಾರಣೆ ನಡೆಸಿ, ಈ ಆದೇಶ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.