ಶುಕ್ರವಾರ, ಮಾರ್ಚ್ 31, 2023
22 °C

ಬೆಳೆಹಾನಿಗೆ ಪರಿಹಾರ ನೀಡಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಲಸೂರ: ಕಳೆದ ವರ್ಷ ಅತಿವೃಷ್ಟಿಯಿಂದ ಆದ ಬೆಳೆಹಾನಿಗೆ ಪರಿಹಾರ ನೀಡುವಂತೆ ವಿಶ್ವಗುರು ಬಸವೇಶ್ವರ ಅಭಿವೃದ್ಧಿ ಟ್ರಸ್ಟ್‌ ಆಗ್ರಹಿಸಿದೆ.

ಈ ಕುರಿತು ಉಪ ತಹಶೀಲ್ದಾರ್‌ ಸಂಜು ಭೈರೆ ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿಪತ್ರ ಸಲ್ಲಿಸಿದೆ.

ಟ್ರಸ್ಟ್‌ನ ಕಾರ್ಯದರ್ಶಿ ಪ್ರವೀಣ ಕಾಡಾದಿ ಮಾತನಾಡಿ, ‘ಕಳೆದ ವರ್ಷ ಹುಲಸೂರ ತಾಲ್ಲೂಕಿನಾದ್ಯಂತ ದಾಖಲೆ ಮಳೆಯಾಗಿ ರೈತರ ಬೆಳೆ ತುಂಬಾ ನಷ್ಟವಾಗಿತ್ತು. ನಷ್ಟ ಕುರಿತು ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ಕೂಡ ಹೋಗಿದೆ. ಆದರೆ, ತಾಲ್ಲೂಕಿನಲ್ಲಿ ಬಹುತೇಕ ರೈತರಿಗೆ ಪರಿಹಾರವೇ ದೊರೆತಿಲ್ಲ. ಹಾಗಾಗಿ, ನಷ್ಟ ಅನುಭವಿಸಿದ ರೈತರಿಗೆ ಶೀಘ್ರ ಪರಿಹಾರ ಬಿಡಗಡೆ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.

‘2018-19, 2019-20ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಫಸಲ್‌ ಬಿಮಾ ಹಣ ಹುಲಸೂರ ಪಂಚಾಯಿತಿ ವ್ಯಾಪ್ತಿಯಲ್ಲಿನ ರೈತರಿಗೆ ಪರಿಹಾರ ದೊರೆತಿಲ್ಲ. ಈ ಕುರಿತು ಅಧಿಕಾರಿಗಳು ಪರಿಶೀಲನೆ ಮಾಡಿ ವಿಮೆ ಕಟ್ಟಿರುವ ರೈತರಿಗೆ ವಿಮೆ ಕಂಪನಿಯಿಂದ ರೈತರಿಗೆ ಪರಿಹಾರ ದೊರೆಯುವಂತೆ ಪ್ರಯತ್ನ ಮಾಡಬೇಕು’ ಎಂದು ಆಗ್ರಹಿಸಿದರು.

ಟ್ರಸ್ಟ್‌ನ ಉಪಾಧ್ಯಕ್ಷ ಆಕಾಶ ಖಂಡಾಳೆ ಮಾತನಾಡಿ, ‘ರೈತರು ಈ ಹಿಂದೆ ಕಟ್ಟಿರುವ ಬೆಳೆ ವಿಮೆ ಬರದೆ ಮತ್ತೆ ಪ್ರಸಕ್ತ ಸಾಲಿನಲ್ಲಿ ವಿಮೆ ಕಟ್ಟುವಂತೆ ರೈತರನ್ನು ಪೀಡಿಸಲಾಗುತ್ತಿದೆ’ ಎಂದು ದೂರಿದರು.

ರಾಜಕುಮಾರ ಜಾಧವ ಮಾತನಾಡಿ, ‘ಖಾಸಗಿ ಕಂಪನಿಗಳು ವಿಮೆಯ ಹೆಸರಿನಲ್ಲಿ ರೈತರಿಗೆ ವಂಚನೆ ಮಾಡುತ್ತಿವೆ. ಇದನ್ನು ಪರಿಹರಿಸಬೇಕು’ ಎಂದು ಆಗ್ರಹಿಸಿದರು.

ಟ್ರಸ್ಟ್‌ನ ಪ್ರಮುಖರಾದ ಸಚಿನ್‌ ವಗ್ಗೆ, ಶಿವರಾಜ ಖಪಲೆ, ರಾಜಕುಮಾರ ತೊಂಡಾರೆ, ಬಿ.ಆರ್‌ ಕವಟೆ, ರಾಮ, ವಿದ್ಯಾಸಾಗರ ಬನಸೂಡೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.