ಬೀದರ್: ‘ಅಂಗವೈಕಲ್ಯ ಶಾಪವೂ ಅಲ್ಲ, ಅದು ಕರ್ಮವೂ ಇಲ್ಲ. ತುಸು ಕಷ್ಟವಾದರೂ ಇಂದಿನ ಜಗತ್ತಿನಲ್ಲಿ ಅಂಗವಿಕಲರೇ ಪ್ರಮುಖ ಸಾಧಕರಾಗಿ ಹೊರಹೊಮ್ಮಿರುವ ನೂರಾರು ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ’ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ಜಗದೀಶ ಹೇಳಿದರು.
ನಗರದ ಕೆಇಬಿ ಕಾಲೊನಿ ಭವಾನಿ ಮಂದಿರದಲ್ಲಿ ನೆಹರು ಯುವ ಕೇಂದ್ರ ಹಾಗೂ ಮಂಗಲಾ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಮಯೂರಕುಮಾರ ಗೋರಮೆ ಮಾತನಾಡಿ, ‘ನೆಹರು ಯುವ ಕೇಂದ್ರ ಅಂಗವಿಕಲ ಸಾಧಕರನ್ನು ನಿರಂತರವಾಗಿ ಗೌರವಿಸುತ್ತ ಬಂದಿದೆ’ ಎಂದರು.
ನಗರಸಭೆ ಮಾಜಿ ಸದಸ್ಯೆ ಚಂದ್ರಕಲಾ ವಿಶ್ವಕರ್ಮ ಮಾತನಾಡಿದರು. ಮಂಗಲಾ ಮಹಿಳಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಮಂಗಲಾ ಮರಕಲೆ ಅಧ್ಯಕ್ಷತೆ ವಹಿಸಿದ್ದರು.
ಸಾಹಿತಿ ವಿದ್ಯಾವತಿ ಹಿರೇಮಠ, ವೀರಭದ್ರೇಶ್ವರ ಶಿಕ್ಷಣ ಹಾಗೂ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸತೀಶ ಬೆಳಕೊಟೆ, ಶುಭದ್ರಾ ಕನ್ಸ್ಟ್ರಕ್ಷನ್ ಅಧ್ಯಕ್ಷ ಕಾಂಬಳೆ ವೇದಿಕೆಯಲ್ಲಿದ್ದರು.