ಬಸವಕಲ್ಯಾಣ: ‘ಈ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಬಿಜೆಪಿ ಟಿಕೆಟ್ನ 16 ಆಕಾಂಕ್ಷಿಗಳ ಜತೆ ಚರ್ಚಿಸಿ ಮಾರ್ಚ್ 30ರಂದು ಮಹತ್ವದ ನಿರ್ಣಯ ತೆಗೆದುಕೊಳ್ಳಲಾಗುವುದು’ ಎಂದು ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಸ್ಪಷ್ಟಪಡಿಸಿದ್ದಾರೆ.
ನಗರದ ತಮ್ಮ ನಿವಾಸದಲ್ಲಿ ಶನಿವಾರ ಆಯೋಜಿಸಿದ್ದ ಬೆಂಬಲಿಗರ ಸಭೆಯಲ್ಲಿ ಅವರು ಮಾತನಾಡಿದರು.
‘ಯಡಿಯೂರಪ್ಪನವರ ಆಹ್ವಾನಕ್ಕೆ ಮಣಿದು ಕಳೆದ ಚುನಾವಣೆಯಲ್ಲಿ ಬಿಜೆಪಿ ಸೇರ್ಪಡೆಯಾದೆ. ಸೋಲು ಅನುಭವಿಸಿದರೂ 45 ಸಾವಿರ ಮತಗಳನ್ನು ಪಡೆದೆ. ಹೀಗಾಗಿ ಉಪ ಚುನಾವಣೆಯಲ್ಲಿಯೂ ಟಿಕೆಟ್ ದೊರಕಲಿದೆ ಎಂಬ ಭರವಸೆ ಇತ್ತು. ನನ್ನ ಜತೆ ಸ್ಥಳೀಯರಾದ 16 ಜನರು ಟಿಕೆಟ್ ಕೇಳಿದ್ದರು. ಅವರಿಗಾದರೂ ಸ್ಪರ್ಧಿಸಲು ಅವಕಾಶ ನೀಡಿ ಎಂದು ವಿನಂತಿಸಲಾಗಿತ್ತು. ಆದರೂ, ಹೊರಗಿನವರಿಗೆ ಟಿಕೆಟ್ ನೀಡಲಾಗಿದೆ. ಸ್ಥಳೀಯರಾದ 16 ಜನರಲ್ಲಿ ಹಾಗೂ ಕ್ಷೇತ್ರದಲ್ಲಿನ 2.50 ಲಕ್ಷ ಮತದಾರರಲ್ಲಿ ಯಾರೂ ಪಕ್ಷವರಿಗೆ ಅರ್ಹರಾಗಿ ಕಾಣಲಿಲ್ಲವೇ’ ಎಂದು ಪ್ರಶ್ನಿಸಿದರು.
‘ಅನ್ಯ ಜಿಲ್ಲೆಯವರಿಗೆ ಏಕೆ ಟಿಕೆಟ್ ನೀಡಲಾಯಿತು ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಟಿಕೆಟ್ ನೀಡಿಕೆಯಲ್ಲಿ ಡೀಲ್ ನಡೆದಿದ್ದು, ದೊಡ್ಡ ಮಟ್ಟದ ಹಣ ಸಂದಾಯ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಪಕ್ಷದವರು ಸ್ಪಷ್ಟನೆ ನೀಡಬೇಕಾಗಿದೆ. ಮಾರ್ಚ್ 30 ರಂದು ಅಕ್ಕಮಹಾದೇವಿ ಕಾಲೇಜು ಆವರಣದಲ್ಲಿ ನಡೆಯುವ ಸಭೆಯಲ್ಲಿ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಅಂದು ಮುಂದಿನ ನಡೆ ಏನೆಂಬುದನ್ನು ನಿರ್ಧರಿಸಲಾಗುವುದು’ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಗುಂಡುರೆಡ್ಡಿ, ಡಾ.ಪೃಥ್ವಿರಾಜ ಬಿರಾದಾರ, ನೀಲೇಶ ಖೂಬಾ, ಸಂಜೀವ ಗಾಯಕವಾಡ, ಶಿವಕುಮಾರ ಬಿರಾದಾರ, ಕಾಳಿದಾಸ ಜಾಧವ ಪಾಲ್ಗೊಂಡಿದ್ದರು.
ಸಭೆಗೆ ಸಲಗರ ಹಾಜರು: ಸಭೆಯ ಮಧ್ಯೆ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಅವರು ಬಂದು ಮಲ್ಲಿಕಾರ್ಜುನ ಖೂಬಾ ಅವರ ಕಾಲುಮುಟ್ಟಿ ನಮಸ್ಕರಿಸಿದರು. ಇಬ್ಬರ ಮಧ್ಯೆ ಯಾವುದೇ ಮಾತುಕತೆ ನಡೆಯಲಿಲ್ಲ. ಮಲ್ಲಿಕಾರ್ಜುನ ಖೂಬಾ ಹಾಗೂ ನೆರೆದ ಎಲ್ಲರನ್ನೂ ಕೈ ಮುಗಿದು ನಮಸ್ಕರಿಸಿದ ತಕ್ಷಣದಲ್ಲಿಯೇ ಶರಣು ಅವರು ಅಲ್ಲಿಂದ ನಿರ್ಗಮಿಸಿದರು. ಈ ಸಮಯದಲ್ಲಿ ಕಾರ್ಯಕರ್ತರು ಮಲ್ಲಿಕಾರ್ಜುನ ಖೂಬಾ ಅವರಿಗೆ ಜಯವಾಗಲಿ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದ್ದರಿಂದ ಕೆಲಕಾಲ ಗದ್ದಲವುಂಟಾಯಿತು.