ಹುಲಸೂರ: ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಸಮಿತಿ ವತಿಯಿಂದ ಪಟ್ಟಣದ ಸ್ವಾಯತ್ತ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.
ರಾಜ್ಯ ಮಟ್ಟದ ಅತ್ಯುತ್ತಮ ಉಪನ್ಯಾಸಕಿ ಪ್ರಶಸ್ತಿ ಪಡೆದ ಮಲ್ಲಮ್ಮ ಆರ್.ಪಾಟೀಲ ಅವರನ್ನು ಕಸಾಪ ತಾಲ್ಲೂಕು ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ನಂತರ ವಿದ್ಯಾರ್ಥಿಗಳು ಅವರೊಂದಿಗೆ ಸಂವಾದ ನಡೆಸಿದರು.
‘ಪ್ರಶಸ್ತಿ ಪಡೆಯಬೇಕು ಎಂದು ನಾನು ವಿದ್ಯಾರ್ಥಿಗಳಿಗೆ ಬೋಧನೆ ಮಾಡಿರಲಿಲ್ಲ. ಈ ಪ್ರಶಸ್ತಿ ಪಡೆದ ಜಿಲ್ಲೆಯ ಮೊದಲ ಉಪನ್ಯಾಸಕಿ ನಾನು. ನನ್ನನ್ನು ಮುಖ್ಯಮಂತ್ರಿಗಳು ಸನ್ಮಾನಿಸಿದ್ದರಿಂದ ಸಂತಸವಾಗಿದೆ. ವಿದ್ಯಾರ್ಥಿಗಳು ನನ್ನನ್ನು ಅಭಿನಂದಿಸಿರುವುದು ಸೇವೆಗೆ ಸಂದ ಗೌರವ’ ಎಂದು ಮಲ್ಲಮ್ಮ ಆರ್.ಪಾಟೀಲ ಹೇಳಿದರು.
ಗುರು ಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಕಸಾಪ ತಾಲ್ಲೂಕು ಸಮಿತಿ ಕೋಶಾಧ್ಯಕ್ಷ ರಮೇಶ ಕಾಮಣ್ಣ ಮಾತನಾಡಿ,‘ಗಡಿಯಲ್ಲಿರುವುದರಿಂದ ನಮ್ಮ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಅನ್ಯ ಭಾಷಿಕರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಕಸಾಪದಿಂದ ಹಲವು ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಜನ ಸಹಕರಿಸಬೇಕು’ ಎಂದರು.
ಕಸಾಪ ತಾಲ್ಲೂಕು ಸಮಿತಿ ಅಧ್ಯಕ್ಷ ನಾಗರಾಜ ಹಾವಣ್ಣ ಅವರು ಅಧ್ಯಕ್ಷತೆ ವಹಿಸಿದ್ದರು.
ಕಸಾಪ ಯುವ ಘಟಕದ ಅಧ್ಯಕ್ಷ ನಾಗೇಶ್ ಮೇತ್ರೆ ನಿರೂಪಿಸಿದರು.
ಪಿಡಿಒ ಸಂದೀಪ್ ಬಿರಾದಾರ, ಕಸಾಪ ಗೌರವ ಅಧ್ಯಕ್ಷ ರುದ್ರಮಣಿ ಮಠಪತಿ, ಕಸಾಪ ಗೌರವ ಕಾರ್ಯದರ್ಶಿ ಬಸವರಾಜ ಪಾಟೀಲ ಗೋರಟಾ, ಉಪನ್ಯಾಸಕರಾದ ರವಿ ಕುಲಕರ್ಣಿ, ಅಶೋಕ, ಗಣಪತರಾವ ಖರಾಟ ಸೇರಿದಂತೆ ಕಾಲೇಜಿನ ಬೋಧಕರು–ಬೋಧಕೇತರ ಸಿಬ್ಬಂದಿ ಇದ್ದರು.