ಬೀದರ್: ಮಹಾತ್ಮ ಗಾಂಧೀಜಿ ಜಯಂತಿ ಪ್ರಯುಕ್ತ ಕನಕ ಬ್ರಿಗೇಡ್ ವತಿಯಿಂದ ಭಾಲ್ಕಿಯ ಲೆಕ್ಚರ್ ಕಾಲೊನಿಯ ಅನಾಥಾಶ್ರಮದಲ್ಲಿ ಇರುವ ಮಕ್ಕಳಿಗೆ ಆಹಾರಧಾನ್ಯದ ಕಿಟ್ ಹಾಗೂ ಹಣ್ಣು ಹಂಪಲು ವಿತರಿಸಲಾಯಿತು.
ಬ್ರಿಗೇಡ್ ಅಧ್ಯಕ್ಷ ರಾಕೇಶ ಚನ್ನಪ್ಪನೋರ್ ಅಕ್ಕಿ, ಬೇಳೆ, ಇತರ ಸಾಮಗ್ರಿ ಒಳಗೊಂಡ ಕಿಟ್ ಹಾಗೂ ಹಣ್ಣು ವಿತರಿಸಿದರು.
ಅನಾಥ ಮಕ್ಕಳ ರಕ್ಷಣೆ ಹಾಗೂ ಪೋಷಣೆ ಎಲ್ಲರ ಹೊಣೆಯಾಗಿದೆ. ಅವರಿಗೆ ಸಹಾಯಹಸ್ತ ಚಾಚುವುದು ಮಾನವೀಯ ಕಾರ್ಯವಾಗಿದೆ ಎಂದು ಅವರು ಹೇಳಿದರು.
ಕನಕ ಬ್ರಿಗೇಡ್ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಸಾವಿರ ಮಾಸ್ಕ್ ಹಾಗೂ ಸ್ಯಾನಿಟೈಸರ್ ಸಾರ್ವಜನಿಕರಿಗೆ ಉಚಿತವಾಗಿ ವಿತರಣೆ ಮಾಡಿದೆ ಎಂದು ತಿಳಿಸಿದರು. ಸಂಸ್ಥೆಯು ಕನಕದಾಸರ ತತ್ವಗಳ ಪ್ರಚಾರ ಹಾಗೂ ಸಾಮಾಜಿಕ ಬದಲಾವಣೆಗೆ ಕಾರಣವಾಗುವಂತಹ ಕಾರ್ಯಕ್ರಮಗಳನ್ನು ಬರುವ ದಿನಗಳಲ್ಲಿ ಆಯೋಜಿಸಲಿದೆ ಎಂದು ಹೇಳಿದರು.