ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣ್ಣಿನ ಗಣಪನ ಮೂರ್ತಿ ತಯಾರಿಕೆಯ ಕಾಶಿನಾಥ

ಚಿಟಗುಪ್ಪ ತಾಲ್ಲೂಕಿನ ರಾಂಪುರದಲ್ಲಿ ಮಣ್ಣಿನ ಮೂರ್ತಿಗಳ ಮಾರಾಟ
Last Updated 28 ಆಗಸ್ಟ್ 2019, 20:14 IST
ಅಕ್ಷರ ಗಾತ್ರ

ಚಿಟಗುಪ್ಪ: ತಾಲ್ಲೂಕಿನ ರಾಂಪುರ ಗ್ರಾಮದಲ್ಲಿಹಲವು ವರ್ಷಗಳಿಂದ ಕಾಶಿನಾಥ ಶಾಂತಪ್ಪ ಗಿರಿಗಿರಿ ಅವರು ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿದ್ದಾರೆ. ಪಟ್ಟಣ ಸೇರಿದಂತೆ ಎಲ್ಲೆಡೆ ಪಿಒಪಿ (ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌) ಗಣೇಶ ವಿಗ್ರಹ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ ಮಣ್ಣಿನ ಮೂರ್ತಿಗಳಿಗೆ ಬೇಡಿಕೆ ಹೆಚ್ಚಿದೆ.

ಕಳೆದ ಹಲವು ವರ್ಷಗಳಿಂದ ಮಣ್ಣಿನ ಗಣಪನ ಮೂರ್ತಿಗಳು ತಯಾರಿಸುವ ಕಾಯಕದಲ್ಲಿ ನಿರತರಾಗಿರುವ ಇವರ ಪರಿಸರ ಪ್ರೇಮ ಎಲ್ಲರಿಗೂ ಮಾದರಿಯಾಗಿದೆ.

ಚಿತ್ರಕಲೆಯಲ್ಲಿ ಡಿಪ್ಲೊಮಾ ಮುಗಿಸಿರುವ ಇವರು ಪತ್ನಿ ರೇಣುಕಾ ಅವರ ನೆರವಿನೊಂದಿಗೆ ಗ್ರಾಮದಲ್ಲಿ ಲಭ್ಯವಿರುವ ಜಿಗುಟು ಮಣ್ಣು, ಸೊಲ್ಲಾಪುರ ದಿಂದ ಖರೀದಿಸಿ ತಂದ ತೆಂಗಿನ ನಾರು ಮಿಶ್ರಣ ಮಾಡಿ, ಯಾವುದೇ ರಾಸಾಯನಿಕ ಬಳಸದೇ ಪುರಾಣ ಪ್ರಸಿದ್ಧ ಗಣೇಶನ ವಿವಿಧ ಭಂಗಿಯ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ಕುಳಿತ ಹಾಗೂ ನಿಂತಿರುವ ವಿವಿಧ ಆಕೃತಿಯ ಗಣೇಶ ಮೂರ್ತಿಗಳನ್ನು ಈಗಾಗಲೇ ತಯಾರಿಸಿದ್ದಾರೆ.

ಮನೆಗಳಲ್ಲಿ ಪ್ರತಿಷ್ಠಾಪಿಸುವ 3 ಅಡಿ ಎತ್ತರದ ಮಣ್ಣಿನ ಮೂರ್ತಿಗಳನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗುತ್ತಿದೆ. ಸಾರ್ವಜನಿಕ ಸಮಿತಿ ಸದಸ್ಯರು ಪ್ರತಿಷ್ಠಾಪಿಸುವ 10 ಅಡಿ ಎತ್ತರದ ಗಣಪನ ಮೂರ್ತಿಗಳೂ ಕೂಡ ಇವರ ಮನೆಯ ಅಂಗಳದಲ್ಲಿಯೇ ಮೂರ್ತರೂಪ ತಳೆಯುತ್ತಿವೆ.

ಕನಿಷ್ಠ ₹ 30 ರಿಂದ ಗರಿಷ್ಠ ₹2,000 ವರೆಗಿನ ಬೆಲೆಯ ಮೂರ್ತಿಗಳು ಸಿದ್ಧಪಡಿಸಿದ್ದಾರೆ. ವಿವಿಧ ಬಗೆಯ ದವಸ ಧಾನ್ಯಗಳು ಗಣೇಶನ ಅಲಂಕಾರಕ್ಕೆ ಬಳಸಿದ್ದಾರೆ.

‘ಒಂದು ಅಡಿ ಗಣೇಶ ಮೂರ್ತಿ ಸಿದ್ಧಪಡಿಸಲು ನಾಲ್ಕು ಗಂಟೆ ಸಮಯ ಬೇಕಾಗುತ್ತದೆ. ಎರಡು ಅಡಿ ಎತ್ತರದ ಗಣೇಶ ಮೂರ್ತಿ ತಯಾರಿಸಲು 10 ಗಂಟೆ ಸಮಯ ಬೇಕಾಗುತ್ತದೆ. ಸಿದ್ಧಪಡಿಸಿದ ಮೂರ್ತಿ ಒಣಗಲು ಕನಿಷ್ಠ ಎಂಟು ದಿನ ಬೇಕಾಗುತ್ತದೆ. ಮಣ್ಣಿನಲ್ಲಿ ಸಿದ್ಧಪಡಿಸಿದ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಿದಾಗ ನೀರಿನಲ್ಲಿ ಸಂಪೂರ್ಣ ಕರಗಲಿವೆ’ ಎಂದು ಕಾಶಿನಾಥ ಅವರು ಮಾಹಿತಿ ನೀಡಿದರು.

‘ಗಣೇಶ ಚತುರ್ಥಿ ಹಬ್ಬದ ಗಣೇಶ ತಯಾರಿಕೆಗೆ ಹತ್ತು ತಿಂಗಳು ನಿತ್ಯ ಆರು ಕಾರ್ಮಿಕರಿಗೆ ಕೆಲಸ ಕೊಡುತ್ತಿದ್ದು, ಪ್ರತಿ ವರ್ಷ ₹ 1.5 ಲಕ್ಷ ವರೆಗೂ ಖರ್ಚು ಮಾಡಿ ಕನಿಷ್ಠ ₹ 2 ಲಕ್ಷದ ವರೆಗೂ ಆದಾಯ ದೊರೆಯುತ್ತಿದೆ. ಹೆಚ್ಚು ಮಳೆ ಸುರಿದಲ್ಲಿ ಹಾನಿಯಂತು ಖಚಿತ’ ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT