ಹುಲಸೂರ: ತಾಲ್ಲೂಕಿನಲ್ಲಿ ಸದ್ಯ ಚಲಾವಣೆಯಲ್ಲಿರುವ ಯಾವುದೇ ನೋಟು ಬಂದ್ ಆಗದಿದ್ದರೂ ₹100ರ ಮುಖ ಬೆಲೆಯ ಹಳೆ ಮಾದರಿ ನೋಟು ಹಾಗೂ ₹10 ನಾಣ್ಯ ಚಲಾವಣೆಗೆ ಸಾರ್ವಜನಿಕರು, ವಿಶೇಷವಾಗಿ ಗಡಿಯಲ್ಲಿನ ಗ್ರಾಮೀಣ ಭಾಗದ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹಳ್ಳಿಗಳಲ್ಲಿನ ಸಣ್ಣ-ಪುಟ್ಟ ಕಿರಾಣಿ ಅಂಗಡಿಗಳು, ಹೋಟೆಲ್, ಡಬ್ಬಾ ಅಂಗಡಿಗಳ ವ್ಯಾಪಾರಿಗಳು ಮತ್ತು ಕೂಲಿಕಾರರು ₹100ರ ಮುಖ ಬೆಲೆಯ ಹಳೆ ಮಾದರಿಯ ನೋಟು ಹಾಗೂ ₹10 ನಾಣ್ಯ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಗ್ರಾಮೀಣ ಭಾಗದವರು ನೋಟು ಚಲಾವಣೆಗೆ ಪರದಾಡುತ್ತಿದ್ದಾರೆ.
2024 ರ ಮಾರ್ಚ್ ಅಂತ್ಯಕ್ಕೆ ನೋಟು ಬಂದ್ ಆಗಿದೆ ಎನ್ನುವ ವದಂತಿ ಹಬ್ಬಿತ್ತು. ಆದ್ದರಿಂದ ನೋಟು ಪಡೆಯಲು ಕೆಲವು ವರ್ತಕರು ಹಿಂದೇಟು ಹಾಕುತ್ತಿದ್ದಾರೆ.
ಹಳೆ ಮಾದರಿಯ ₹100 ರ ಮುಖ ಬೆಲೆಯ ನೋಟು ಪಡೆಯಲು ನಿರ್ವಾಹಕರೊಬ್ಬರು ನಿರಾಕರಿಸಿದ ಕಾರಣ ಈಚೆಗೆ ಖಾಸಗಿ ಬಸ್ವೊಂದರಲ್ಲಿ ಗಲಾಟೆ ನಡೆದಿದೆ.
’ಈಚೆಗೆ ಮದುವೆ ಸಮಾರಂಭಕ್ಕೆ ಹೋದಾಗ ಕಿರಾಣಿ ಅಂಗಡಿಯಲ್ಲಿ ಸಣ್ಣ ಪುಟ್ಟ ವಸ್ತುಗಳು ಖರೀದಿಸಿದೆ. ನನ್ನ ಬಳಿಯಿದ್ದ ಹಳೆ ಮಾದರಿಯ ₹100ರ ನೋಟು ನೀಡಿದಾಗ ಅಂಗಡಿಯಾತ ಅದನ್ನು ಪಡೆಯಲು ನಿರಾಕರಿಸಿದ. ಕೊನೆಗೆ ₹500ರ ನೋಟು ನೀಡಿ ಚಿಲ್ಲರೆ ಪಡೆಯಲು ಹರಸಾಹಸ ಪಡಬೇಕಾಯಿತು' ಎಂದು ಜಮಖಂಡಿ ಗ್ರಾಮದ ಲಹು ಘಾಯಾಳ ತಿಳಿಸಿದರು.
’ಹಳ್ಳಿಗಳಲ್ಲಿ ಬಹುತೇಕರು ಹಳೆ ಮಾದರಿಯ ನೋಟು ಪಡೆಯಲು ಹಿಂದೇಟು ಹಾಕುತ್ತಾರೆ. ಅದೇ ರೀತಿ ಅಂಗಡಿಯವರು ಹಳೆ ನೋಟುಗಳನ್ನು ನೀಡುತ್ತಾರೆ. ನಾವು ವಾಪಸ್ ನೀಡಿದರೆ ತೆಗೆದುಕೊಳ್ಳುವುದಿಲ್ಲ. ನಾವು ಅವುಗಳನ್ನು ಬ್ಯಾಂಕ್ ಜಮಾ ಮಾಡುತ್ತಿದ್ದೇವೆ’ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸ್ವಸಹಾಯ ಸಂಘಗಳ ಪಿಗ್ಮಿ ಸಂಗ್ರಹಕಾರರಾದ ಭಾಗ್ಯಶ್ರೀ ಭೋಪಳೆ ಹೇಳಿದರು.
₹100 ಹಳೆ ನೋಟ್ ಬ್ಯಾನ್ ಆಗಿಲ್ಲ: ಗಡಿಯಲ್ಲಿ ₹100 ಮುಖ ಬೆಲೆಯ ಹಳೆನೋಟು ಅಮಾನ್ಯ ಎಂಬ ಸುದ್ದಿ ಹರಿದಾಡಿದ್ದು, ನೂರರ ಮುಖಬೆಲೆ ನೋಟು ಮಾರ್ಚ್ 31ರ ವರೆಗೆ ಮಾತ್ರ ಬಳಸಬಹುದು. ಆ ನಂತರ ಮತ್ತೆ ಬಳಸಬಾರದು ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ಹಳೆ ಮಾದರಿಯ ₹100 ರ ಮುಖ ಬೆಲೆಯ ನೋಟು ಬಂದ್ ಆಗಿಲ್ಲ. ಈ ಕುರಿತು ಆರಬಿಐ ಯಾವುದೇ ಸೂಚನೆ ನೀಡಿಲ್ಲ. ವದಂತಿ ನಂಬಿಕೊಂಡು ನೋಟು ಸ್ವೀಕರಿಸಲು ನಿರಾಕರಿಸುವುದು ತಪ್ಪು. ಹಾಗೊಂದು ವೇಳೆ ತೀರಾ ಹಾಳಾದ ನೋಟುಗಳಿದ್ದರೆ ಮತ್ತು ಮಾರುಕಟ್ಟೆಯಲ್ಲಿ ಚಲಾವಣೆ ಸಾಧ್ಯವಾಗದಿದ್ದರೆ ಬ್ಯಾಂಕ್ಗೆ ಬಂದು ಬದಲಾವಣೆ ಮಾಡಿಕೊಳ್ಳಲು ಅವಕಾಶ ಇದೆ. ಸುಳ್ಳು ಸುದ್ದಿ ನಂಬಬೇಡಿ ಎಂದು ಎಸ್ಬಿಐ ಶಾಖೆಯ ವ್ಯವಸ್ಥಾಪಕ ನಂದಕಿಶೋರ ಹೇಳಿದರು.
ಸಾಮಾಜಿಕ ಜಾಲತಾಣಗಳಲ್ಲಿ ಬರುವ ಎಲ್ಲಾ ಮಾಹಿತಿಗಳು ನಿಜವಿರುವುದಿಲ್ಲ. ಹೀಗಾಗಿ ವಾಟ್ಸಾಪ್ನಲ್ಲಿ ಬರುವ ತಲೆಬುಡ ಇಲ್ಲದ, ತಪ್ಪು ಮಾಹಿತಿಗಳಿಂದ ದೂರವಿರಿ. ಇಂಥ ಸಂದೇಶಗಳನ್ನು ಯಾರಿಗೂ ಫಾರ್ವರ್ಡ್ ಮಾಡದಿರಿನಂದಕಿಶೋರ, ಎಸ್ಬಿಐ ಶಾಖೆಯ ವ್ಯವಸ್ಥಾಪಕ
ವಿಶೇಷವಾಗಿ ಹಳೆಯ ₹100 ಮುಖಬೆಲೆಯ ನೋಟುಗಳು ಜೊತೆ ₹50 ನೋಟ್ ಹಾಗೂ ₹10 ಕಾಯಿನ್ ಕೂಡಾ ಹೋಟೆಲ್, ಕಿರಾಣಿ ಅಂಗಡಿಗಳಲ್ಲಿ ತೆಗೆದುಕೊಳ್ಳುತ್ತಿಲ್ಲ.ಗುಲಾಂ ಬಡಾಯಿ, ಗ್ರಾಹಕರು
ನಮ್ಮ ಗ್ರಾಹಕ ಸೇವಾ ಕೇಂದ್ರಕ್ಕೆ ರೈತರು ಹಾಗೂ ಕೂಲಿ ಕಾರ್ಮಿಕರು ಬೆರಳಚ್ಚು ತಂತ್ರಜ್ಞಾನದ ಮೂಲಕ ಹಣ ಪಡೆಯಲು ಬಂದಾಗ ನಮ್ಮಿಂದಲು ಕೂಡಾ ಹಳೆಯ ₹100 ಮುಖಬೆಲೆ ನೋಟಗಳು ಪಡೆಯುತ್ತಿಲ್ಲ.ಪ್ರಮೋದ್ ತೇಲಂಗ್, ಗ್ರಾಹಕ ಸೇವಾ ಕೇಂದ್ರದ ವ್ಯವಸ್ಥಾಪಕ
ಹಳ್ಳಿಗರು, ಕೆಲವು ವರ್ತಕರು ₹100ರ ನೋಟು ಪಡೆಯಲು ಹಿಂದೇಟು ಗಡಿಯಲ್ಲಿ ಹಳೆ ಮಾದರಿಯ ನೋಟು ಹಾಗೂ ನಾಣ್ಯ ಚಲಾವಣೆಗೆ ಪರದಾಟ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.