ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆ ದರ ನೀಡಿ ಭೂಸ್ವಾಧೀನ ಮಾಡಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ

ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಸಭೆ
Last Updated 14 ಜುಲೈ 2021, 7:20 IST
ಅಕ್ಷರ ಗಾತ್ರ

ಭಾಲ್ಕಿ: ‘ಬಸವಕಲ್ಯಾಣದ ನೂತನ ಅನುಭವ ಮಂಟಪ ತ್ವರಿತವಾಗಿ ಸಾಕಾರವಾಗಬೇಕಾದರೆ ಅದಕ್ಕೆ ಅಗತ್ಯವಾದ 69 ಎಕರೆ ಭೂಮಿಯನ್ನು ಮಾರುಕಟ್ಟೆ ದರ ನೀಡಿ ಖರೀದಿಸಬೇಕು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸಲಹೆ ಮಾಡಿದ್ದಾರೆ.

ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ನಡೆದ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಪ್ರಸ್ತುತ ಸರ್ಕಾರದ ಬಳಿ 20 ಎಕರೆ ಮತ್ತು ದಾನವಾಗಿ ಬಂದಿರುವ 11 ಎಕರೆ ಸೇರಿ 31 ಎಕರೆ ಭೂಮಿ ಮಾತ್ರ ಇದ್ದು, ಉಳಿದ 69 ಎಕರೆ ಭೂಸ್ವಾಧೀನ ತುರ್ತಾಗಿ ಆಗಬೇಕಾಗಿದೆ. ಪ್ರಸಕ್ತ ನಿಯಮಾವಳಿ ರೀತ್ಯ ಭೂಸ್ವಾಧೀನ ಪ್ರಕ್ರಿಯೆ ನಡೆದರೆ, ಅದು ಮುಗಿಯಲು ಕನಿಷ್ಠ 8-10 ತಿಂಗಳಾದರೂ ಬೇಕಾಗುತ್ತದೆ. ಈ ಕಾರಣ ಮತ್ತು ಸರ್ಕಾರದ ನೂತನ ಕಾಯಿದೆಯ ರೀತ್ಯ ಕನ್ಸೆಂಟ್ ಅವಾರ್ಡ್‌ನಂತೆ ಭೂಮಿ ಪಡೆಯಬೇಕಾಗುತ್ತದೆ. ಹೀಗಾಗಿ ಭೂ ಮಾಲೀಕರ ಮನವೊಲಿಸಿ ಮಾರುಕಟ್ಟೆ ದರ ನೀಡಿ ಖರೀದಿಸುವುದು ಸೂಕ್ತ’ ಎಂದರು.

ನೂತನ ಅನುಭವ ಮಂಟಪದ ಕಟ್ಟಡ ನಿರ್ಮಾಣ ಸಂಬಂಧ ಈಗಾಗಲೇ ಟೆಂಡರ್ ಕರೆದಿರುವ ಕುರಿತಂತೆ ಮಾತನಾಡಿದ ಅವರು, ‘ಭೂಸ್ವಾಧೀನ ಆಗದೆ ವಿಸ್ತೃತ ಯೋಜನಾ ವರದಿ-ಡಿಪಿಆರ್ ಅನುಮೋದನೆ ಅಪೂರ್ಣವಾಗುತ್ತದೆ. ಹೀಗಾಗಿ ಯಾವುದೇ ಅಡೆತಡೆ, ವಿಳಂಬ ಇಲ್ಲದೆ ಅನುಭವ ಮಂಟಪ ಸಾಕಾರವಾಗಲು ತಕ್ಷಣವೇ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ, ತಕ್ಷಣವೇ ಡಿಪಿಆರ್ ಅನುಮೋದನೆಗೆ ತಜ್ಞರ ಸಮಿತಿ ರಚಿಸಬೇಕು’ ಎಂದು ಸಲಹೆ ನೀಡಿದರು.

‘ಮುಖ್ಯಮಂತ್ರಿಯವರು ತಮ್ಮ ಎಲ್ಲ ಸಲಹೆಗಳಿಗೂ ಸಕಾರಾತ್ಮಕವಾಗಿ ಸ್ಪಂದಿಸಿ, ಪರಿಹಾರ ನೀಡಲೂ ತಾತ್ವಿಕ ಸಮ್ಮತಿ ನೀಡಿದರು’ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.

‘ಶಾಸಕರನ್ನು ಮಂಡಳಿ ಸದಸ್ಯರನ್ನಾಗಿಸಿ’

‘ಬಸವಕಲ್ಯಾಣವಷ್ಟೇ ಅಲ್ಲದೆ ಬೀದರ್ ಜಿಲ್ಲೆಯ ಅನೇಕ ಕಡೆಗಳಲ್ಲಿ ಅಣ್ಣ ಬಸವಣ್ಣನರು, ಹಲವು ಶಿವಶರಣರ ಪವಿತ್ರ ತಾಣಗಳಿದ್ದು, ಇವುಗಳ ಅಭಿವೃದ್ಧಿಯೂ ಆಗಬೇಕಾಗಿದೆ. ಪ್ರಯುಕ್ತ ಜಿಲ್ಲೆಯ ಎಲ್ಲ ಶಾಸಕರನ್ನೂ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ಸದಸ್ಯರನ್ನಾಗಿ ನಾಮಾಂಕನ ಮಾಡಿ ಎಲ್ಲ ಸಭೆಗೂ ಆಹ್ವಾನಿಸುವಂತೆ’ ಖಂಡ್ರೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT