ಬೀದರ್: ‘ಜನರಿಗೆ ಸಾಕಲು ಸಾಧ್ಯವಾಗದ ಜಾನುವಾರುಗಳ ಪೋಷಣೆಗಾಗಿ ಸರ್ಕಾರ ಪ್ರತಿ ತಾಲ್ಲೂಕಿಗೆ ಒಂದರಂತೆ ಗೋಶಾಲೆ ಆರಂಭಿಸಲು ಚಿಂತನೆ ನಡೆಸಿದೆ’ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವಾಣ್ ಹೇಳಿದರು.
ಇಲ್ಲಿಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಗೋಶಾಲೆ ವಾರ್ಷಿಕೋತ್ಸವ ಹಾಗೂ ‘ಗೋ ರಥ ಗೋ ಸೇವೆ’ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ,‘ಚಾಲ್ತಿಯಲ್ಲಿರುವ ಗೋಶಾಲೆಗಳಿಗೂ ಸರ್ಕಾರದಿಂದ ನೆರವು ಕಲ್ಪಿಸಲು ಪ್ರಯತ್ನಿಸಲಾಗುವುದು’ ಎಂದರು.
‘ಬಹುತೇಕ ಎಲ್ಲ ಗ್ರಾಮಗಳಲ್ಲಿ ಗೋಮಾಳ ಇದೆ. ಅದೇ ಸ್ಥಳದಲ್ಲಿ ಸರ್ಕಾರದಿಂದ ಗೋಶಾಲೆ ನಿರ್ಮಿಸಲಾಗುವುದು. ಯಾವಾಗ ಶುರು ಮಾಡಬೇಕು ಎನ್ನುವ ಕುರಿತು ಚರ್ಚಿಸಿ ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಹೇಳಿದರು.