ಬೀದರ್: ಜೀವನದ ಗುರಿ ಸಾಧನೆಗೆ ಕಠಿಣ ಪರಿಶ್ರಮ ಹಾಗೂ ಗುರುವಿನ ಮಾರ್ಗದರ್ಶನ ಅಗತ್ಯ ಎಂದು ಪ್ರಾಚಾರ್ಯ ಚಂದ್ರಪ್ಪ ಭತಮುರ್ಗೆ ಅಭಿಪ್ರಾಯಪಟ್ಟರು.
ನಗರದ ಚಂದ್ರಪ್ಪ ಗೌರಶೆಟ್ಟಿ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಧರ್ಮ ಹಾಗೂ ಕೀರ್ತಿ ಶಾಶ್ವತ ಮೌಲ್ಯಗಳಾಗಿವೆ. ವಿದ್ಯಾರ್ಥಿಗಳು ಆದರ್ಶ ವ್ಯಕ್ತಿತ್ವ ರೂಪಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಿದ್ಧಾರೂಢ ಮಹಿಳಾ ಪದವಿ ಕಾಲೇಜು ಪ್ರಾಚಾರ್ಯ ಮಾಣಿಕರಾವ್ ಪಂಚಾಳ ಮಾತನಾಡಿ, ಶಿಷ್ಯನ ಅಜ್ಞಾನ ಕಳೆದು ಸುಜ್ಞಾನಿಯನ್ನಾಗಿ ಮಾಡುವ ಶಕ್ತಿ ಗುರುವಿಗೆ ಇದೆ. ಹೀಗಾಗಿ ಗುರುವನ್ನು ಗೌರವಿಸಬೇಕು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು ಎಂದು ತಿಳಿಸಿದರು.
ಶ್ರೀಮತಿ ಇಂದಿರಾಬಾಯಿ ಗುರುತಪ್ಪ ಶೆಟಕಾರ ಪ್ರೌಢಶಾಲೆ ಮುಖ್ಯ ಶಿಕ್ಷಕ ಲಕ್ಷ್ಮಣ ಪೂಜಾರಿ ಮಾತನಾಡಿ, ಸಂಸ್ಕಾರ ಇಲ್ಲದ ಶರೀರ ಜೀವಂತ ಶವ ಇದ್ದಂತೆ. ವಿದ್ಯಾರ್ಥಿಗಳು ದೇಶಪ್ರೇಮ, ಭಾಷಾ ಪ್ರೇಮ, ಬಂಧು ಪ್ರೇಮ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ವತ್ರ ತಿಪ್ಪೆಯೊಳಗಿದ್ದರೂ ಹೊಳೆಯುತ್ತದೆ. ಹಾಗೆಯೇ ವಿದ್ಯಾರ್ಥಿಗಳು ಮೌಲ್ಯಯುತ ಶಿಕ್ಷಣ ಪಡೆದು ಪ್ರಕಾಶಿಸಬೇಕು ಎಂದು ತಿಳಿಸಿದರು.
ಉಪನ್ಯಾಸಕ ರಮೇಶ ಪಾಟೀಲ ಚಟ್ನಳ್ಳಿ ಮಾತನಾಡಿ, ವರ್ಷಕ್ಕೊಮ್ಮೆ ಶಿಕ್ಷಕರ ದಿನ ಆಚರಿಸಿದರೆ ಸಾಲದು. ಗುರು ಆದವರು ರಾಧಾಕೃಷ್ಣನ್ ಅವರ ಆದರ್ಶಗಳನ್ನು ಪಾಲಿಸಬೇಕು ಎಂದು ಹೇಳಿದರು.
ಪ್ರತಿಭಾವಂತ ವಿದ್ಯಾರ್ಥಿಗಳಾದ ಅಂಜಲಿ, ವೆಂಕಟೇಶ ಅವರನ್ನು ಸನ್ಮಾನಿಸಲಾಯಿತು.