ಬಸವಕಲ್ಯಾಣ: ತಾಲ್ಲೂಕಿನ ಪ್ರತಾಪುರದ ರತನ ಪಂಚಾಳ (62) ಇವರು ಕೋವಿಡ್ನಿಂದ ಸಾವನ್ನಪ್ಪದಿದ್ದರೂ ಅಂತ್ಯಕ್ರಿಯೆಗೆ ಊರ ಜನ ಬಾರದ ಕಾರಣ ಕೆಲ ಮುಸ್ಲಿಂ ಯುವಕರು ಹಿಂದೂ ಪದ್ಧತಿಯಂತೆ ಅಂತ್ಯಸಂಸ್ಕಾರ ನಡೆಸಿದ್ದಾರೆ.
ರತನ ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೆ, ಕೋವಿಡ್ ತಪಾಸಣೆ ಮಾಡಿರಲಿಲ್ಲ. ಅಂಥ ಲಕ್ಷಣಗಳು ಕೂಡ ಇದ್ದಿರಲಿಲ್ಲ. ಆದರೂ, ಸಂಶಯಪಟ್ಟು ಅಂತ್ಯಕ್ರಿಯೆ ನೆರವೇರಿಸಲು ಯಾರೂ ಮುಂದಾಗಲಿಲ್ಲ ಎನ್ನಲಾಗುತ್ತಿದೆ.
ಈ ವಿಷಯವನ್ನು ಸಮೀಪದಲ್ಲಿಯೇ ಇರುವ ಬಸವಕಲ್ಯಾಣ ನಗರದ ರಾಜಾ ಬಾಗಸವಾರ ದರ್ಗಾ ಹತ್ತಿರದಲ್ಲಿದ್ದ ಮುಸ್ಲಿಂ ಯುವಕರಿಗೆ ತಿಳಿಸಿದಾಗ ಮಾಸ್ಕ್ ಹಾಗೂ ಹ್ಯಾಂಡ್ಗ್ಲೌಸ್ ಹಾಕಿಕೊಂಡು ಬಂದು ಶವವನ್ನು ಸುಡುವುದಕ್ಕೆ ನೆರವಾಗಿದ್ದಾರೆ. ಕೋಮುಸೌಹಾರ್ದತೆ ಮೆರೆದ ಯುವಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
‘ಮೃತರು ಬಡವರಾಗಿದ್ದರಿಂದ ಶವಸಂಸ್ಕಾರಕ್ಕೂ ಹಣವಿರಲಿಲ್ಲ. ಆದ್ದರಿಂದ ನಾನು ಕೆಲವರ ಜತೆ ಊರಲ್ಲಿ ಸಂಚರಿಸಿ ದೇಣಿಗೆ ಸಂಗ್ರಹಿಸಿದೆ. ಅಂತ್ಯಕ್ರಿಯೆಗೆ ಯಾರೂ ಬರುತ್ತಿಲ್ಲ ಎಂಬುದನ್ನು ಬಸವಕಲ್ಯಾಣದ ಮುಸ್ಲಿಂ ಯುವಕರಿಗೆ ತಿಳಿಸಿದಾಗ ಅವರು ಬಂದು ಈ ಕಾರ್ಯದಲ್ಲಿ ಕೈಜೋಡಿಸಿದರು. ಅಂತ್ಯಕ್ರಿಯೆಗೆ ಬೇಕಾದ ಕಟ್ಟಿಗೆ ಇತ್ಯಾದಿ ಖರೀದಿಸಿ ಎಲ್ಲವನ್ನೂ ವ್ಯವಸ್ಥಿತವಾಗಿ ನೆರವೇರಿಸಲಾಯಿತು’ ಎಂದು ಅದೇ ಊರಿನವರಾದ ಎಬಿವಿಪಿ ಜಿಲ್ಲಾ ಮುಖಂಡ ಲೋಕೇಶ ಮೋಳಕೆರೆ ತಿಳಿಸಿದ್ದಾರೆ.