ಹುಮನಾಬಾದ್: ಅಂಗನವಾಡಿ ಮಕ್ಕಳು, ಗರ್ಭಿಣಿಯರಿಗೆ ನೀಡುವ ಹಾಲಿನ ಪೌಡರನ್ನು ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಕ್ರೂಜರ್ ವಾಹನ ಸಮೇತ ಇಬ್ಬರು ಆರೋಪಿಗಳನ್ನು ಪಟ್ಟಣದ ಆರ್.ಟಿ.ಓ ಚೆಕ್ ಪೋಸ್ಟ್ ಹತ್ತಿರ ಶುಕ್ರವಾರ ಬಂಧಿಸಲಾಗಿದೆ.
ವಾಹನ ಚಾಲಕ ಹಳ್ಳಿಖೇಡ(ಕೆ) ಗ್ರಾಮದ ಚಾಂದಪಾಶ್, ಕಲಬುರ್ಗಿಯ ಬಸವರಾಜ ಸಿದ್ದಣ್ಣ ಬಂಧಿತರು.
ಕಲಬುರ್ಗಿಯಿಂದ ಹೈದರಾಬಾದ್ಗೆ ಕ್ರೂಜರ್ ವಾಹನದಲ್ಲಿ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ನೀಡಲಾಗುವ ಹಾಲಿನ ಪೌಡರನ್ನು ಅನಧಿಕೃತವಾಗಿ ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಪಿಎಸ್ಐ ರವಿಕುಮಾರ ಸಿಡಿಪಿಓ ಶಿವಪ್ರಕಾಶ, ಪೊಲೀಸ್ ಸಿಬ್ಬಂದಿ ಲಕ್ಷ್ಮಣ, ಮಲ್ಲಪ್ಪ ಮಳ್ಳಿ, ಶಿವಾನಂದ ದಾಳಿ ನಡೆಸಿದ್ದಾರೆ.
₹ 2 ಲಕ್ಷ ಮೌಲ್ಯದ ಹಾಲಿನ ಪೌಡರ್ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಹುಮನಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.