ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಸೋಯಾ ಬೆನ್ನು ಬಿದ್ದ ಜಿಲ್ಲೆಯ ರೈತರು

ಜಿಲ್ಲೆಯಲ್ಲಿ ಹೆಚ್ಚಿದ ಏಕ ಬೆಳೆ ಬಿತ್ತನೆ ಕ್ಷೇತ್ರ
Last Updated 22 ಜೂನ್ 2021, 19:31 IST
ಅಕ್ಷರ ಗಾತ್ರ

ಬೀದರ್‌: ಕಬ್ಬು ಬೆಳೆದು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಜಿಲ್ಲೆಯ ರೈತರು ಸೋಯಾ ಬೆಳೆ ಬೆಳೆಯಲು ಹೆಚ್ಚಿನ ಆಸಕ್ತಿ ತೋರಿಸಿದ್ದಾರೆ. ಸಕ್ಕರೆ ಕಾರ್ಖಾನೆಗಳು ರೈತರಿಗೆ ಸಕಾಲದಲ್ಲಿ ಕಬ್ಬಿನ ಬಾಕಿ ಪಾವತಿಸುತ್ತಿಲ್ಲ. ಯೋಗ್ಯ ಬೆಲೆಯನ್ನೂ ಕೊಡಲು ಮುಂದೆ ಬರುತ್ತಿಲ್ಲ. ಸೋಯಾಗೆ ಉತ್ತಮ ಬೆಲೆ ದೊರಕುತ್ತಿರುವ ಕಾರಣ ಎಲ್ಲರೂ ಸೋಯಾ ಬೀಜಕ್ಕಾಗಿ ಮುಗಿ ಬೀಳುತ್ತಿದ್ದಾರೆ.

ಜಿಲ್ಲೆಯಲ್ಲಿ ಆಗಾಗ ಸಾಧಾರಣ ಮಳೆಯಾಗುತ್ತಿದೆ. ಜುಲೈ ಅಂತ್ಯದ ವರೆಗೂ ಬಿತ್ತನೆ ಮಾಡಲು ಅವಕಾಶ ಇದೆ. ಸೋಯಾಗೆ ಉಳಿದ ಬೆಳೆಗಳಂತೆ ಹೆಚ್ಚು ಕಷ್ಟಪಡುವ ಅಗತ್ಯ ಇಲ್ಲ. ಒಂದು ತಿಂಗಳ ಹಿಂದೆ ಸೋಯಾ ಪ್ರತಿ ಕ್ವಿಂಟಲ್‌ಗೆ ₹ 8 ಸಾವಿರಕ್ಕೆ ಮಾರಾಟವಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ₹ 7,200 ರಿಂದ ₹ 7,600ರ ವರೆಗೆ ಮಾರಾಟವಾಗುತ್ತಿದೆ. ಇದೇ ಕಾರಣಕ್ಕೆ ರೈತರು ಸೋಯಾ ಬೆಳೆಯಲು ಉತ್ಸುಕರಾಗಿದ್ದಾರೆ.

ಜಿಲ್ಲೆಗೆ ಕಳೆದ ವರ್ಷ 78 ಸಾವಿರ ಕ್ವಿಂಟಲ್ ಸೋಯಾಬೀಜ ಕೊಡಲಾಗಿದೆ. ಪ್ರಸಕ್ತ ವರ್ಷ 93,300 ಕ್ವಿಂಟಲ್‌ ಬೀಜ ವಿತರಣೆ ಮಾಡಲಾಗಿದೆ. ಈ ವರ್ಷ ಹೆಚ್ಚುವರಿಯಾಗಿ 14,344 ಕ್ವಿಂಟಲ್‌ ಬೀಜ ವಿತರಿಸಲಾಗಿದೆ. ಪರ್ಯಾಯ ಬೆಳೆ ಬೆಳೆಯುವ ರೈತರೂ ಈಗ ಸೋಯಾಗೆ ಬೇಡಿಕೆ ಇಟ್ಟಿದ್ದಾರೆ. ಕಾರಣ ಜಿಲ್ಲೆಯಲ್ಲಿ ಸೋಯಾ ಬೀಜಕ್ಕೆ ಬೇಡಿಕೆ ಹೆಚ್ಚಾಗಿದೆ.

ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರು ಮುಗಿಬಿದ್ದು ಸೋಯಾ ಬೀಜ ಕೇಳಿ ಖರೀದಿಸುತ್ತಿದ್ದಾರೆ. ಬೇರೆ ಬೀಜ ಖರೀದಿಸಲು ನಿರಾಸಕ್ತಿ ತೋರಿಸುತ್ತಿದ್ದಾರೆ. ಸೋಯಾ ಬೀಜ ಸಿಗದ ರೈತರು ಪ್ರತಿಭಟನೆಗಳನ್ನೂ ನಡೆಸುತ್ತಿದ್ದಾರೆ. ಸರ್ಕಾರದ ಮೇಲೆ ನಿರಂತರ ಒತ್ತಡ ಹಾಕುತ್ತಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ ಮೇಲೆ ಜಿಲ್ಲೆಗೆ ಮತ್ತೆ 250 ಕ್ವಿಂಟಲ್ ಸೋಯಾ ಬೀಜ ಪೂರೈಕೆಯಾಗಿದೆ. ಔರಾದ್‌ ಹಾಗೂ ಭಾಲ್ಕಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಸೋಯಾ ಬೀಜ ವಿತರಿಸಲಾಗಿದೆ. ಆದರೂ ಹೆಚ್ಚು ಬೇಡಿಕೆ ಇರುವ ಕಡೆ ಮತ್ತೆ ಸೋಯಾ ಬೀಜ ವಿತರಿಸಲಾಗುತ್ತಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ತಾರಾಮಣಿ ತಿಳಿಸುತ್ತಾರೆ.

ಏಕ ಬೆಳೆ ಪದ್ಧತಿಯಿಂದ ಬದಲಾಗಿ, ಮಿಶ್ರ ಬೆಳೆ, ಅಂತರ ಬೆಳೆ, ಬಹು ಬೆಳೆ, ಬೆಳೆಯಿರಿ, ಸಮಗ್ರ ಕೃಷಿಯಲ್ಲಿ ತೊಡಗಿಸಿಕೊಳ್ಳಿರಿ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ರೈತರಿಗೆ ಮನವಿ ಮಾಡುತ್ತಲೇ ಇದ್ದಾರೆ. ರೈತರ ಮನಸ್ಥಿತಿ ಬದಲಾಗುತ್ತಿಲ್ಲ. ಸೋಯಾ ಭರವಸೆಯ ಬೆಳೆ ಎಂದು ರೈತರ ಮನದಲ್ಲಿ ಒಡಮೂಡಿದೆ.

‘ಅತಿವೃಷ್ಟಿಯಾದರೂ ಸೋಯಾ ಬೆಳೆಗೆ ತಡೆದುಕೊಳ್ಳುವ ಶಕ್ತಿ ಇದೆ. ಸೋಯಾ ಎಣ್ಣೆ ಬೆಲೆ ಹೆಚ್ಚಾಗಿದೆ. ಹೆಚ್ಚಿನ ಬೆಲೆ ಸಿಗುವ ನಿರೀಕ್ಷೆಯಿಂದ ರೈತರು ಇದನ್ನೇ ಬೆಳೆಯಲು ಆಸಕ್ತಿ ತೋರುತ್ತಿದ್ದಾರೆ. ಹೀಗಾಗಿ ಸಹಜವಾಗಿ ಬೇಡಿಕೆ ಹೆಚ್ಚಿದೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ ಹೇಳುತ್ತಾರೆ.

ಶೇಕಡ 24ರಷ್ಟು ಪ್ರದೇಶದಲ್ಲಿ ಬಿತ್ತನೆ:ಮುಂಗಾರು ಹಂಗಾಮಿನಲ್ಲಿ 3,70,982 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಜಿಲ್ಲೆಯ ಅರ್ಧದಷ್ಟು ಪ್ರದೇಶದಲ್ಲಿ ಸೋಯಾ ಬೆಳೆಯಲಾಗುತ್ತಿದೆ. 1,82,448 ಹೆಕ್ಟೇರ್ ಪ್ರದೇಶಕ್ಕೆ 1,14,954 ಕ್ವಿಂಟಲ್ ಸೋಯಾಅವರೆ ಬಿತ್ತನೆ ಬೀಜದ ಅವಶ್ಯಕತೆ ಇದೆ.

ಮೊದಲ ಹಂತದಲ್ಲಿ 93,300 ಕ್ವಿಂಟಲ್ ಸೋಯಾಅವರೆ ಬೀಜ ವಿತರಿಸಲಾಗಿದೆ. ಔರಾದ್ ತಾಲ್ಲೂಕಿಗೆ 29,179 ಕ್ವಿಂಟಲ್ ಬೀಜ ಕೊಡಲಾಗಿದೆ.

ಸದ್ಯ 44,400 ಹೆಕ್ಟೇರ್ ಪ್ರದೇಶದಲ್ಲಿ ಸೋಯಾಅವರೆ, 16,374 ಹೆಕ್ಟೇರ್‌ನಲ್ಲಿ ಕಬ್ಬು, 11,400 ಹೆಕ್ಟೇರ್‌ನಲ್ಲಿ ತೊಗರಿ, 8,739 ಹೆಕ್ಟೇರ್‌ನಲ್ಲಿ ಹೆಸರು, 6,950 ಹೆಕ್ಟೇರ್‌ನಲ್ಲಿ ಉದ್ದು ಹಾಗೂ 1,970 ಹೆಕ್ಟೇರ್ ಪ್ರದೇಶದಲ್ಲಿ ಹೈಬ್ರಿಡ್ ಜೋಳ ಬಿತ್ತನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಶೇಕಡ 24ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದೆ.

ವಾಡಿಕೆಗಿಂತ ಅಧಿಕ ಮಳೆ
ಜಿಲ್ಲೆಯಲ್ಲಿ ಜನವರಿ 1 ರಿಂದ ಜೂನ್ 20ರ ವರೆಗೆ 204 ಮಿ.ಮೀ ಮಳೆಯಾಗಿದೆ. ಜಿಲ್ಲೆಯ ಎಲ್ಲ 30 ಹೋಬಳಿಗಳಲ್ಲಿ ಸರಾಸರಿ 119 ರಿಂದ 204 ಮಿ.ಮೀ ವರೆಗೆ ಮಳೆ ಬಿದ್ದಿದೆ. ಔರಾದ್ ತಾಲ್ಲೂಕಿನಲ್ಲಿ ಶೇಕಡ 33 ರಷ್ಟು ಅಧಿಕ ಮಳೆ ಸುರಿದಿದೆ.

ಬ್ಬರದ ಕೊರತೆ ಇಲ್ಲ
ಜಿಲ್ಲೆಯಲ್ಲಿ 7,045 ಮೆಟ್ರಿಕ್‌ ಟನ್ ಡಿಎಪಿ, 4,332 ಮೆಟ್ರಿಕ್‌ ಟನ್ ಯೂರಿಯಾ, 640 ಮೆಟ್ರಿಕ್‌ ಟನ್‌ ಎಂಒಪಿ, 4,780 ಮೆಟ್ರಿಕ್‌ ಟನ್ ಕಾಂಪೋಸ್ಟ್ ಹಾಗೂ 2,360 ಮೆಟ್ರಿಕ್‌ ಟನ್‌ನಷ್ಟು ಎಸ್‌ಎಸ್‌ಪಿ ರಸಗೊಬ್ಬರ ದಾಸ್ತಾನು ಇದೆ. ಪ್ರಸ್ತುತ ರಸಗೊಬ್ಬರದ ಕೊರತೆ ಇಲ್ಲ ಎಂದು ಕೃಷಿ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT