ಬೀದರ್: ‘ಆಹಾರ ಮನುಷ್ಯನ ದೇಹವನ್ನು ಸದೃಢಗೊಳಿಸಿದರೆ, ಸಂಗೀತ ಉದಾಸೀನತೆ ಕಳೆದು ಮಿದುಳಿಗೆ ಸ್ಫೂರ್ತಿ ತುಂಬುತ್ತದೆ. ವ್ಯಕ್ತಿಯ ಸ್ಫೂರ್ತಿಯ ಚಿಲುಮೆಯೂ ರೂಪುಗೊಳ್ಳುತ್ತದೆ’ ಎಂದು ಸಂಗೀತ ಕಲಾವಿದ ರಾಮುಲು ಗಾದಗಿ ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ಆಶ್ರಯದಲ್ಲಿ ಇಲ್ಲಿನ ಕೆ.ಎಚ್.ಬಿ ಕಾಲೊನಿಯ ಸೂರ್ ತಾಲ್ ಸಂಗೀತ ವಿದ್ಯಾಲಯದ ಪಂಡಿತ ರಾಮುಲು ಗಾದಗಿ ನಿವಾಸದಲ್ಲಿ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತು’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವಿದ್ಯಾರ್ಥಿ ದೆಸೆಯಿಂದಲೆ ಸಂಗೀತದ ಅಭಿರುಚಿ ಬೆಳೆಸಿಕೊಂಡ ನನಗೆ ಶಿಕ್ಷಕರು, ತಾಯಿ-ತಂದೆ ನನ್ನ ಸಂಗೀತಕ್ಕೆ ಪ್ರೇರಣೆಯಾದರೆ ಪಂಡಿತ ಭೀಮಸೇನ್ ಜೋಶಿ ಮೊದಲಾದ ಸಂಗೀತ ದಿಗ್ಗಜರು ಪ್ರಭಾವ ಬೀರಿದರು’ ಎಂದು ತಿಳಿಸಿದರು.
ಗುರುಕುಲ ಗೀತ ವಿದ್ಯಾಲಯ ಹಾಗೂ ಸ್ವರ ಸಾಧನ ಸಂಗೀತ ವಿದ್ಯಾಲಯದ ಸಂಗೀತಾಚಾರ್ಯ ಕೃಷ್ಣ ಮುಖೇಡಕರ್ ನಡೆಸಿಕೊಟ್ಟ ಸಂವಾದಕ್ಕೆ ಪ್ರತಿಕ್ರಿಯಿಸಿದ ಅವರು ‘ಸಂಗೀತದೊಂದಿಗೆ ಸಾಹಿತ್ಯ, ಧರ್ಮ, ಅಧ್ಯಾತ್ಮ ಅಂತರ್ ಸಂಬಂಧ ಹೊಂದಿವೆ’ ಎಂದರು.
‘ಸಂಗೀತದಲ್ಲಿ ಗುರು ಶಿಷ್ಯ ಸಂಬಂಧ ಅನನ್ಯವಾಗಿದ್ದು ಇಲ್ಲಿ ತಾಳ್ಮೆ ಸಹನೆ ಅರ್ಪಣಾ ಭಾವ ಅಗತ್ಯ’ ಎಂದು ತಿಳಿಸಿದರು.
ಸಂಗೀತ ಮತ್ತು ನೃತ್ಯ ಅಕಾಡೆಮಿಯ ಮಾಜಿ ಸದಸ್ಯ ರಾಜೇಂದ್ರ ಸಿಂಗ್ ಪವಾರ ಕಾರ್ಯಕ್ರಮ ಉದ್ಘಾಟಿಸಿ, ‘ಸಾಹಿತ್ಯ ಪರಿಷತ್ತು ಕಲಾವಿದರ ಮನೆಗೆ ಬರುತ್ತಿರುವುದು ಶ್ಲಾಘನೀಯ. ಇದೊಂದು ಉತ್ತಮ ಬೆಳವಣಿಗೆಯಾಗಿದೆ’ ಎಂದು ಬಣ್ಣಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ‘ಸಾಂಸ್ಕೃತಿಕ ಸಾಧಕರನ್ನು ಗುರುತಿಸಿ ಅವರ ಬದುಕಿನ ಸಂವೇದನೆ, ಸಾಧನೆಗಳನ್ನು ಸಮಾಜಕ್ಕೆ ತಲುಪಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಕ.ಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ. ಎಸ್. ಮನೋಹರ ಮಾತನಾಡಿ, ‘ಸಾಹಿತಿ, ಕಲಾವಿದರ ಜೀವನ ಸಾಧನೆ ಅವಲೋಕನ ಮಾಡುವ ಈ ಕಾರ್ಯಕ್ರಮವನ್ನು ಕೋವಿಡ್ ಆತಂಕದಿಂದಾಗಿ ಸಾಮಾಜಿಕ ಜಾಲತಾಣಗಳ ವೀಕ್ಷಿಸುವಂತಾಗಿದೆ’ ಎಂದರು
ಟಿ.ಎಂ.ಮಚ್ಚೆ, ಬಾಪು ಮಡಕಿ, ಸುಬ್ಬಣ್ಣ ಕರಕನಳ್ಳಿ, ರಾಮುಲು ಗಾದಗಿ ಇದ್ದರು. ಕಲಾವಿದ ನಾಗರಾಜ ಜೋಗಿ ಸ್ವಾಗತಿಸಿದರು. ವಿದ್ಯಾವತಿ ಹಿರೇಮಠ ನಿರೂಪಿಸಿದರು. ಬಸವರಾಜ ಬಲ್ಲೂರ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.