ಬಸವಕಲ್ಯಾಣ: ‘ಸ್ವಾವಲಂಬಿ ಜೀವನಕ್ಕೆ ಸಾಕ್ಷರತೆ ಅಗತ್ಯ. ಆದ್ದರಿಂದ ಎಲ್ಲರೂ ಅಕ್ಷರ ಕಲಿಯುವುದು ಅತ್ಯಗತ್ಯವಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಯಶೋದಾ ರಾಠೋಡ ಹೇಳಿದ್ದಾರೆ.
ತಾಲ್ಲೂಕು ಲೋಕ ಶಿಕ್ಷಣ ಸಮಿತಿಯಿಂದ ಮಂಗಳವಾರ ನಡೆದ ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
‘ಮಹಿಳೆಯರು ಮನೆಗಳಲ್ಲಿದ್ದುಕೊಂಡು ಮಹತ್ವದ ಕೆಲಸ ಮಾಡುತ್ತಾರೆ. ತಾಯಿಯೇ ಮೊದಲ ಗುರು ಎನ್ನಲಾಗುತ್ತದೆ. ಆದ್ದರಿಂದ ಮಹಿಳೆಯರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಬೇಕು’ ಎಂದರು.
ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮೇತ್ರೆ ಮಾತನಾಡಿ,‘ಈಚೆಗೆ ತಾಲ್ಲೂಕಿಗೆ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶ ಬಂದಿದೆ. ಸಾಕ್ಷರತಾ ಪ್ರಮಾಣವೂ ಹೆಚ್ಚಾಗಬೇಕು’ ಎಂದರು.
ತಾಲ್ಲೂಕು ಸಾಕ್ಷರತಾ ಸಂಯೋಜಕ ಚನ್ನವೀರ ಜಮಾದಾರ ಮಾತನಾಡಿದರು. ಕಲಾವಿದರಾದ ತಾಜೊದ್ದೀನ್ ಇನಾಮದಾರ್, ಮಹಾದೇವಿ ಹೊಳ್ಕರ್, ಗೋದಾವರಿ ಶಿಂಧೆ, ವಿಜಯಲಕ್ಷ್ಮಿ ಚವಾಣ್, ಮಂಗಲಾ ಪಾಟೀಲ ಸಾಕ್ಷರತಾ ಗೀತೆ ಹಾಡಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.