ಬಸವಕಲ್ಯಾಣ: ‘ಮಹಾತ್ಮ ಜ್ಯೋತಿಬಾ ಫುಲೆ ಅವರು ಸ್ತ್ರೀ ಶಿಕ್ಷಣದ ಹರಿಕಾರರು’ ಎಂದು ಅಂಬೇಡ್ಕರ್ ಯೂತ್ ಕ್ಲಬ್ ಖಜಾಂಚಿ ಶಿವಾಜಿ ಶಿಂಧೆ ಹೇಳಿದ್ದಾರೆ.
ನಗರದ ಡಾ.ಅಂಬೇಡ್ಕರ್ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ನಡೆದ ಮಹಾತ್ಮ ಜ್ಯೋತಿಬಾ ಫುಲೆ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ,‘ ಶತ ಶತಮಾನಗಳಿಂದ ಕೇವಲ ಒಂದೇ ವರ್ಗಕ್ಕೆ ಸೀಮಿತವಾಗಿದ್ದ ಶಿಕ್ಷಣವನ್ನು ಮಹಿಳೆಯರಿಗೂ ದೊರಕುವಂತೆ ಮಾಡಿದರು. ಪ್ರಥಮವಾಗಿ ತಮ್ಮ ಪತ್ನಿ ಸಾವಿತ್ರಿಬಾಯಿಗೆ ಶಿಕ್ಷಣ ನೀಡಿ ಅವರಿಂದ ಶಾಲೆ ನಡೆಸುವಂತೆ ವ್ಯವಸ್ಥೆಗೈದರು’ ಎಂದರು.
ಸಂಸ್ಥೆ ಅಧ್ಯಕ್ಷ ನರಸಿಂಗರಾವ್ ಕಾಂಬಳೆ, ಪ್ರಾಂಶುಪಾಲ ಡಾ.ಜೈಶೇನಪ್ರಸಾದ, ನಾಗೇಶ ಡೊಂಗರೆ, ವಿಜಯಕುಮಾರ ರಾಯಪಳ್ಳೆ, ಶ್ರೀಧರ ಚಲವಾದಿ ಮಾತನಾಡಿದರು. ಉಪನ್ಯಾಸಕರಾದ ಲಕ್ಷ್ಮಣ ಕಾರಾಮುಂಗೆ, ಶೇಖ ಸೈಪಾನ, ಶಿವಶರಣಪ್ಪ ದೇಸಾಯಿ, ಅಶೋಕ ದೇವಕತ್ತೆ, ಸಂತೋಷ ಶಿಂಧೆ ಹಾಗೂ ದೀಪಕ ಮೋರೆ ಪಾಲ್ಗೊಂಡಿದ್ದರು.