ಬೀದರ್: ನಂಬಿಕೆ ಇರಲಿ. ಆದರೆ, ಮೌಢ್ಯ ಬೇಡ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಹುಲಿಕಲ್ ನಟರಾಜ್ ನುಡಿದರು.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ ಇಲ್ಲಿಯ ಬಿ.ವಿ.ಭೂಮರಡ್ಡಿ ಕಾಲೇಜಿನಲ್ಲಿ ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಏರ್ಪಡಿಸಿದ್ದ ವೈಜ್ಞಾನಿಕ ಚಿಂತನೆಗಳಲ್ಲಿ ಶಿಕ್ಷಣ ಮಹತ್ವ ಕುರಿತ ಉಪನ್ಯಾಸ ಹಾಗೂ ಪರಿಷತ್ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜೋತಿಷಿಗಳು ಮಾಧ್ಯಮಗಳಲ್ಲಿ ಮೌಢ್ಯದ ಬೀಜ ಬಿತ್ತುತ್ತಿದ್ದಾರೆ. ಎಲ್ಲೆಡೆ ಮೌಢ್ಯ ತೊಲಗಿ, ವಿಜ್ಞಾನ ಬೆಳಗಬೇಕಾಗಿದೆ ಎಂದು ಹೇಳಿದರು.
12ನೇ ಶತಮಾನದಲ್ಲಿ ಬಸವಣ್ಣನವರು ವಚನಗಳ ಮೂಲಕ ಮೌಢ್ಯದ ವಿರುದ್ಧ ಜಾಗೃತಿ ಮೂಡಿಸಿದ್ದರು. ಅವರ ವಚನಗಳ ಪಾಲನೆಯಿಂದ ಮೌಢ್ಯ ದೂರವಾಗಲಿದೆ ಎಂದು ಬಸವ ಸೇವಾ ಪ್ರತಿಷ್ಠಾನದ ಡಾ. ಗಂಗಾಂಬಿಕೆ ಅಕ್ಕ ತಿಳಿಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಾಂಡುರಂಗ ಬೆಲ್ದಾರ್, ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ ರಾಜ್ಯ ಘಟಕದ ಕಾರ್ಯದರ್ಶಿ ಬಾಬುರಾವ್ ದಾನಿ ಮಾತನಾಡಿದರು.
ಸುರೇಂದ್ರ ಹುಡಗಿಕರ್, ಬಾಲಾಜಿ ಬಿರಾದಾರ, ಸಿದ್ಧಾರೆಡ್ಡಿ ನಾಗೂರಾ, ಡಾ. ಸಿ. ಆನಂದರಾವ್, ಡಾ. ವಿ.ಎಂ. ಚನಶೆಟ್ಟಿ, ರಫಿ ತಾಳಿಕೋಟೆ, ಸಂತೋಷ ಮಂಗಳೂರೆ, ಬಳವಂತರಾವ್ ರಾಠೋಡ್, ಹೀರಾಮಣಿ ಚೌಹಾಣ್, ವೈಜಿನಾಥ ಪಾಟೀಲ, ಸಂಗ್ರಾಮ ಎಂಗಳೆ, ವಿಜಯಕುಮಾರ ಗೌರೆ, ಎಂ.ಎಸ್. ಮನೋಹರ ಇದ್ದರು.
ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ ನಿರ್ದೇಶಕ ಲೋಕೇಶ ಉಡಬಾಳೆ ನಿರೂಪಿಸಿದರು. ಕಾರ್ಯದರ್ಶಿ ಸಂಜೀವಕುಮಾರ ಸ್ವಾಮಿ ಸ್ವಾಗತಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ಕಲಾಲ್ ದೇವಿಪ್ರಸಾದ್ ವಂದಿಸಿದರು.