ಬೀದರ್: ಗುರು ಗುರುವಾಗಿಯೇ ಇರಬೇಕು. ಲಘುವಾಗಿ ವರ್ತಿಸಬಾರದು. ಸಣ್ಣತನ ತೋರಬಾರದು ಎಂದು ಉಪನ್ಯಾಸಕ ರಾಜಕುಮಾರ ಅಲ್ಲೂರೆ ನುಡಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ವತಿಯಿಂದ ನಗರದ ಅವರ ನಿವಾಸದಲ್ಲಿ ಆಯೋಜಿಸಿದ್ದ ಮನೆಯಂಗಳದಲ್ಲಿ ಮಾತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗುರು ಆಗಿ ಈವರೆಗೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೆಲಸ ಮಾಡಿದ ತೃಪ್ತಿ ತಮಗೆ ಇದೆ ಎಂದು ಹೇಳಿದರು.
ಬಾಲ್ಯದಲ್ಲಿ ಕುರಿಗಾಹಿಯಾಗಿ ದುಡಿದ, ಸರ್ಕಾರಿ ಶಾಲೆಯಲ್ಲಿ ಓದಿ ಉಪನ್ಯಾಸಕ ಹುದ್ದೆ ಗಿಟ್ಟಿಸಿಕೊಂಡ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಡಾ. ಕೆ. ರವೀಂದ್ರನಾಥ ಅವರ ಮಾರ್ಗದರ್ಶನದಲ್ಲಿ ‘ತೆಲಂಗಾಣ ಮತ್ತು ಹೈದರಾಬಾದ್ ಕರ್ನಾಟಕ ಪ್ರದೇಶಗಳ ಕನ್ನಡ ಶಾಸನಗಳು: ಸಾಂಸ್ಕೃತಿಕ ಅಧ್ಯಯನ’ ಕುರಿತು ಸಂಶೋಧನಾ ಪ್ರಬಂಧ ಬರೆದು ಅದೇ ಶೀರ್ಷಿಕೆಯಡಿ ಪುಸ್ತಕ ಪ್ರಕಟಿಸಿದ್ದನ್ನೂ ತೆರೆದಿಟ್ಟರು.
ಬೀದರ್ನ ಗಟ್ಟಿ ಸಂಶೋಧಕರಲ್ಲಿ ರಾಜಕುಮಾರ ಅಲ್ಲೂರೆ ಒಬ್ಬರು. ಪರಿಷತ್ತು ಸಾಹಿತಿಗಳಿಗೆ ವೇದಿಕೆ ಕಲ್ಪಿಸುವ ತನ್ನ ಕಾರ್ಯವನ್ನು ಮುಂದುವರಿಸಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಹೇಳಿದರು.
ಸಾಹಿತಿ, ಸಾಧಕರ ಸಾಂಸ್ಕೃತಿಕ ಸಾಧನೆಗಳನ್ನು ಮನೆ ಮನಕ್ಕೆ ತಲುಪಿಸುವುದು ಮನೆಯಂಗಳದಲ್ಲಿ ಮಾತು ಸಂವಾದ ಕಾರ್ಯಕ್ರಮದ ಆಶಯವಾಗಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮನೋಹರ ತಿಳಿಸಿದರು.
ಪ್ರಾಚಾರ್ಯ ಡಾ. ಬಂಡಯ್ಯ ಸ್ವಾಮಿ ಮಾತನಾಡಿದರು. ದೇವೇಂದ್ರ ಕರಂಜೆ ಹಾಗೂ ಪ್ರತಿಭಾ ಮಂಚ್ ಸಂವಾದ ನಡೆಸಿಕೊಟ್ಟರು.