ಬೀದರ್: ‘ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹಾಗೂ ಅವರ ತಂಡದಿಂದ ನನಗೆ ಜೀವ ಭಯ ಇದೆ. ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸುವೆ’ ಎಂದು ಔರಾದ್ನ ಬಿಜೆಪಿ ವಿಜೇತ ಅಭ್ಯರ್ಥಿ ಪ್ರಭು ಚವಾಣ್ ಹೇಳಿದರು.
‘ಖೂಬಾ ಅವರು ನನಗೆ ಜಾತಿ ನಿಂದನೆ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಸೋಲಿಸಿ, ಕಬ್ಬು ಕಟಾವು ಮಾಡಲು ಕಳುಹಿಸಿಕೊಡುವುದಾಗಿ ತಮ್ಮ ಸಮೀಪವರ್ತಿಗಳ ಬಳಿ ಹೇಳಿಕೊಂಡಿದ್ದಾರೆ’ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
‘ಬಿಜೆಪಿಯ ಸಂಸದ ಮತ್ತು ಸಚಿವರಾಗಿರುವ ಅವರು ಔರಾದ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ನನ್ನನ್ನು ಸೋಲಿಸಲು ಪ್ರಯತ್ನಿಸಿದರು. ಆದರೆ, ಅಭಿವೃದ್ಧಿ ಕೆಲಸ ಹಾಗೂ ಜನರ ಆಶೀರ್ವಾದದಿಂದ ಪುನರಾಯ್ಕೆಯಾದೆ’ ಎಂದರು.
ಇದರ ಕುರಿತು ಪ್ರತಿಕ್ರಿಯೆಗಾಗಿ ಸಂಪರ್ಕಿಸಿದಾಗ, ಭಗವಂತ ಖೂಬಾ ಅವರು ಲಭ್ಯವಾಗಲಿಲ್ಲ.
ಖೂಬಾ ಅವರ ಪಕ್ಷ ವಿರೋಧಿ ಚಟುವಟಿಕೆ ಕುರಿತು ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ವರಿಷ್ಠರಿಗೆ ದೂರು ಸಲ್ಲಿಸುವೆ. ಕ್ರಮಕ್ಕಾಗಿ ಒತ್ತಾಯಿಸುವೆ ಎಂದು ತಿಳಿಸಿದರು.