ಬೀದರ್: ಜಿಲ್ಲೆಗೆ ಶುಕ್ರವಾರ ಮುಂಗಾರು ಮಳೆ ಪ್ರವೇಶಿಸಿದೆ. ಬೀದರ್, ಔರಾದ್, ಕಮಲನಗರ, ಚಿಟಗುಪ್ಪ ಹಾಗೂ ಹುಮನಾಬಾದ್ ತಾಲ್ಲೂಕಿನಲ್ಲಿ ಶುಕ್ರವಾರ ಸಂಜೆ ಸಾಧಾರಣ ಮಳೆಯಾಗಿದೆ.
ನಾಲ್ಕು ತಿಂಗಳು ಪ್ರಖರತೆಯನ್ನು ತೋರಿಸುತ್ತಿದ್ದ ಸೂರ್ಯ ಮೋಡದ ಹಿಂದೆ ಮರೆಯಾದ. ಮಳೆಯಿಂದ ಭುವಿ ತಂಪಾಯಿತು. ಜೂನ್ ಮೊದಲ ವಾರದಲ್ಲಿ ಮಳೆ ಆರಂಭವಾಗಬೇಕಿತ್ತು. ಈ ಬಾರಿ ಮೂರನೇ ವಾರದಲ್ಲಿ ಮುಂಗಾರು ಪ್ರವೇಶ ಆಗಿದೆ.
ರೈತರು ಭೂಮಿ ಉಳುಮೆ ಮಾಡಿಕೊಂಡು ಬಿತ್ತನೆಗೆ ಸಜ್ಜಾಗಿದ್ದಾರೆ. ಸಂಜೆ ತಂಪೆರಚಿದ ಮಳೆ ರೈತರು ಸಂಭ್ರಮಿಸುವಂತೆ ಮಾಡಿತು. ನಗರಪ್ರದೇಶದಲ್ಲಿ ಸುಡು ಬಿಸಿಲಿಗೆ ಕಾದ ಕಾವಲಿಯಂತಾಗಿದ್ದ ಕಟ್ಟಡಗಳು ಮಳೆಗೆ ತಂಪಾದವು.
ನಗರದ ಕೆಲ ಕಾಲೊನಿಗಳಲ್ಲಿ ತೆರೆದ ಬಾವಿಗಳು ಬತ್ತಿವೆ. ಮನೆಯ ಮಾಲೀಕರು ಹಾಗೂ ಬಾಡಿಗೆದಾರರು ಮನೆಯ ಮಾಳಿಗೆಯಿಂದ ಹರಿದು ಬಂದ ನೀರು ಸಂಗ್ರಹಿಸಿಕೊಂಡರು.