ಬೀದರ್: ‘ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಜನಸಾಮಾನ್ಯರ ಆರೋಗ್ಯ ರಕ್ಷಣೆಗೆ ಆಯುಷ್ಮಾನ್ ಭಾರತ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ’ ಎಂದು ಸಂಸದ ಭಗವಂತ ಖೂಬಾ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಮೀಪ ಹೆಲ್ಪಿಂಗ್ ಹ್ಯಾಂಡ್ಸ್ ಸೊಸೈಟಿಯ ನೂತನ ಬಿ.ಬಿ.ಎಸ್. ಆಸ್ಪತ್ರೆ ಉದ್ಘಾಟಿಸಿ ಅವರು ಮಾತನಾಡಿದರು.
‘ಬಡವರಿಗೆ ಅತ್ಯಂತ ಕಡಿಮೆ ಶುಲ್ಕದಲ್ಲಿ ಹೆರಿಗೆ ಹಾಗೂ ಮಕ್ಕಳಿಗೆ ಉತ್ತಮ ವೈದ್ಯಕೀಯ ಸೇವೆ ಒದಗಿಸಲು ಸಮಾನ ಮನಸ್ಕ ವೈದ್ಯರು ಸೇರಿ ಆರಂಭಿಸಿರುವ ಆಸ್ಪತ್ರೆಗೆ ಕೇಂದ್ರದ ಯೋಜನೆ ಕೊಡಿಸಲು ಪ್ರಯತ್ನಿಸಲಾಗುವುದು’ ಎಂದು ತಿಳಿಸಿದರು.
‘ವೈದ್ಯ ವೃತ್ತಿ ಎಲ್ಲಕ್ಕಿಂತಲೂ ಪವಿತ್ರವಾಗಿದೆ. ವೈದ್ಯರನ್ನು ದೇವರಿಗೆ ಹೋಲಿಸಲಾಗುತ್ತದೆ. ಹೀಗಾಗಿ ವೈದ್ಯರು ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸಬೇಕು’ ಎಂದು ಬೀದರ್ ಶಾಸಕ ರಹೀಂಖಾನ್ ಹೇಳಿದರು.
‘ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಬೇಕು ಎನ್ನುವ ಉದ್ದೇಶದಿಂದಲೇ ಶುರು ಮಾಡಲಾದ ಅತ್ಯಾಧುನಿಕ ಸೌಕರ್ಯಗಳನ್ನು ಒಳಗೊಂಡ ಹೊಸ ಆಸ್ಪತ್ರೆಯು ಓಲ್ಡ್ಸಿಟಿಯ ಬಡ ಜನರಿಗೆ ನೆರವಾಗಲಿದೆ’ ಎಂದು ತಿಳಿಸಿದರು.
’ಆಸ್ಪತ್ರೆಯು ದಿನದ 24 ಗಂಟೆ ತುರ್ತು ವೈದ್ಯಕೀಯ ಸೇವೆ, ಸುಸಜ್ಜಿತ ಶಸ್ತ್ರಚಿಕಿತ್ಸಾ ಕೊಠಡಿ, ಐಸಿಯು, ಒಳ ರೋಗಿ, ಹೊರ ರೋಗಿ ವಿಭಾಗ, ಆಂಬುಲನ್ಸ್ ಸೇರಿದಂತೆ ವಿವಿಧ ಸೌಕರ್ಯಗಳನ್ನು ಹೊಂದಿದೆ’ ಎಂದು ಹೆಲ್ಪಿಂಗ್ ಹ್ಯಾಂಡ್ಸ್ ಸೊಸೈಟಿಯ ಡಾ. ಅಬ್ದುಲ್ ರೌಫ್ ಸಿದ್ದಿಕಿ ಮಾಹಿತಿ ನೀಡಿದರು.
ಹೆಲ್ಪಿಂಗ್ ಹ್ಯಾಂಡ್ಸ್ ಸೊಸೈಟಿಯ ಡಾ. ಸೈಯದ್ ಅಬ್ದುಲ್ ಜಾವೇದ್, ಡಾ.ಅಕ್ಬರ್ ಉಲ್ ಹಕ್ ಖಾದ್ರಿ, ಡಾ. ಸೈಯದ್ ಶುಜತ್ ಪಾಶಾ, ಮಹಮ್ಮದ್ ರಫಿಕ್ ಅಹಮ್ಮದ್, ಸಿರಾಜುದ್ದಿನ್ ಎಸ್.ಕೆ. ಇದ್ದರು.